ಭಾರತದ ಹವಾಮಾನ ಕ್ರಿಯಾ ಯೋಜನೆ: ಶೇ.33 -35 ರಷ್ಟು ಇಂಗಾಲ ತೀವ್ರತೆ ಕಡಿಮೆಮಾಡುವ ಗುರಿ
ವಾಷಿಂಗ್ಟನ್: ವಿಶ್ವಸಂಸ್ಥೆಯ ನಿಯಮಾವಳಿಗಳ ಸಭೆಯಲ್ಲಿ 'ಹವಾಮಾನ ಕ್ರಿಯಾ ಯೋಜನೆ'ಯನ್ನು ಸಲ್ಲಿಸಿರುವ ಭಾರತ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇ.33 -35 ರಷ್ಟು ಕಡಿಮೆ ಮಾಡುವುದಾಗಿ ಹೇಳಿದೆ.
ಹವಾಮಾನ ಬದಲಾವಣೆಗಾಗಿ ನಡೆಯುವ ಶೃಂಗಸಭೆಗೂ ಮುನ್ನ (ಯುಎನ್ಎಫ್ ಸಿಸಿಸಿ) ಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿಯ ಪಾಲನ್ನು ಹೆಚ್ಚಿಸುವುದಾಗಿ ಭಾರತ ಹೇಳಿದೆ. ಭಾರತ ತನ್ನ ಉದ್ದೇಶಿತ ರಾಷ್ಟ್ರೀಯ ನಿಶ್ಚಿತ ಕೊಡುಗೆ (ಐ.ಎನ್.ಡಿ.ಸಿ) ಯನ್ನು ಮಹತ್ವಾಕಾಂಕ್ಷೆಯದ್ದಾಗಿದೆ ಎಂದು ಹೇಳಿದೆ.
ಉತ್ಪನ್ನಗಳಿಂದ ಹೊರಬರುವ ಇಂಗಾಲ ಹೊರಸೂಸುವಿಕೆಯನ್ನು 2030 ರ ವೇಳೆಗೆ ಶೇ.33 -35 ರಷ್ಟು ಕಡಿಮೆ ಮಾಡುವುದು ಹಾಗೂ ಫಾಸಿಲ್ ರಹಿತ ಇಂಧನ ಆಧಾರಿತ ಶಕ್ತಿ ಸಂಪನ್ಮೂಲಗಳಿಂದ ಶೇ.40 ರಷ್ಟು ವಿದ್ಯುಚ್ಛಕ್ತಿಯ ಗುರಿ ಹೊಂದಿದೆ ಎಂದು ಭಾರತ ತಿಳಿಸಿದೆ.
ಪ್ಯಾರಿಸ್ ನಲ್ಲಿ ವರ್ಷಾಂತ್ಯಕ್ಕೆ ನಡೆಯಲಿರುವ ಶೃಂಗಸಭೆಯಲ್ಲಿ ಸಮಗ್ರ ಸಮಾನತೆ ಮತ್ತು ಹವಾಮಾನ ಬದಲಾವಣೆ ಒಪ್ಪಂದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. ಶೃಂಗಸಭೆಯಲ್ಲಿ ಅವಳಡಿಸಿಕೊಳ್ಳುವ ಅಂಶಗಳನ್ನು ಕಾರ್ಯರೂಪಕ್ಕೆ ತರಲು 2015 -2030 ವರೆಗೆ 206 ಬಿಲಿಯನ್ ಡಾಲರ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.