ಇಸ್ಲಾಮಾಬಾದ್: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಪಾಕಿಸ್ತಾನದ ಅತ್ಯುತ್ತಮ ಎನ್ ಜಿಎ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಯುದ್ಧ ಪ್ರಚೋದಕರಾಗಿದ್ದಾರೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಶುಕ್ರವಾರ ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಬುರ್ಹಾನ್ ವಾನಿ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಎಂಬ ಮಾಹಿತಿ ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಷರಫ್ ಅವರು, ಹಫೀಜ್ ಸಯೀದ್ ಜೊತೆಗೆ ಬುರ್ಹಾನ್ ವಾನಿ ನಂಟು ಹೊಂದಿದ್ದ ಎಂಬ ವರದಿಯಿಂದ ನನಗೇನು ಆಶ್ಚರ್ಯವಾಗುತ್ತಿಲ್ಲ. ಹಫೀಜ್ ಸಯೀದ್ ಒಬ್ಬ ವಿದ್ಯಾವಂತ ವ್ಯಕ್ತಿಯಾಗಿದ್ದು, ಆತನೊಬ್ಬ ಇಂಜಿನಿಯರ್ ಆಗಿದ್ದಾನೆ. ಲಷ್ಕರ್-ಇ-ತೊಯ್ಬಾ ಸಂಘಟನೆ ಪಾಕಿಸ್ತಾನದಲ್ಲಿ ಉತ್ತಮ ಎನ್ ಜಿಒ ಆಗಿದ್ದು, ಪ್ರವಾಹ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸಾಕಷ್ಟು ಸಹಾಯವನ್ನು ಮಾಡುತ್ತಾರೆಂದು ಹೇಳಿದ್ದಾರೆ.
ಇದೇ ವೇಳೆ ಉಗ್ರ ಬುರ್ಹಾನ್ ವಾನಿಯನ್ನು ಸಮರ್ಥಿಸಿಕೊಂಡಿರುವ ಅವರು, ಭಾರತ ಸರ್ಕಾರ ನೀತಿಗಳು ಆತ ಶಸ್ತ್ರಾಸ್ತ್ರಗಳನ್ನು ಹಿಡಿಯುವಂತೆ ಮಾಡಿತ್ತು. ಭಾರತ ಸರ್ಕಾರ ವಾನಿ ಕುಟುಂಬಸ್ಥರ ಮೇಲೆ ದೌರ್ಜನ್ಯವೆಸಗಿತ್ತು. ಈ ಹಿನ್ನೆಲೆಯಲ್ಲಿ ಆತ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದ ಎಂದು ಆರೋಪಿಸಿದ್ದಾರೆ.
ಹಫೀಜ್ ಸಯೀದ್ ಒಬ್ಬ ಭಯೋತ್ಪಾದಕ ಎಂಬುದನ್ನು ನಾನು ಒಪ್ಪುವುದಿಲ್ಲ. ನಾನೊಬ್ಬ ವಕೀಲನಾಗಿದ್ದರೆ, ನ್ಯಾಯಾಲಯದಲ್ಲಿ ಆತನ ಪರವಾಗಿ ವಾದ ಮಂಡಿಸುತ್ತಿದ್ದೆ. ಪಾಕಿಸ್ತಾನದ ಅಧ್ಯಕ್ಷನಾಗಿದ್ದರೆ, ವಿಶ್ವಸಂಸ್ಥೆಯಲ್ಲಿ ಆತನ ಪರವಾಗಿ ಹೋರಾಡುತ್ತಿದ್ದೆ ಎಂದು ತಿಳಿಸಿದ್ದಾರೆ.
ವಿಶ್ವದಲ್ಲಿ ಪಾಕಿಸ್ತಾನಕ್ಕಿಂತ ಭಾರತ ಅತ್ಯಂತ ಪ್ರಭಾವ ಹೊಂದಿರುವಂತಹ ರಾಷ್ಚ್ರವಾಗಿತ್ತು. ಹೀಗಾಗಿಯೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ಭಾರತಕ್ಕೆ ಇಷ್ಟವಿಲ್ಲ ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲಾಹೋರ್ ಭೇಟಿ ಕುರಿತಂತೆ ಮಾತನಾಡಿರುವ ಅವರು, ಭಾರತದ ಪ್ರಧಾನಿ ಲಾಹೋರ್ ಎಷ್ಟು ಸರಿ ಬೇಕಾದರೂ ಬರಬಹುದು, ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರಿಗೆ ಸಾಕಷ್ಟು ಬಾರಿ ಮುತ್ತುಗಳನ್ನು ನೀಡಬಹುದು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಬ್ಬ ಯುದ್ಧ ಪ್ರಚೋದಕರನಾಗಿದ್ದಾರೆಂದು ಹೇಳಿದ್ದಾರೆ.
Advertisement