ಢಾಕಾ ದಾಳಿ ಟ್ರೇಲರ್ ಅಷ್ಟೇ, ಭವಿಷ್ಯದಲ್ಲಿ ಮತ್ತಷ್ಟು ದಾಳಿ: ಇಸಿಸ್

ವಿಶ್ವಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಆಚರಣೆಯಲ್ಲಿ ತೊಡಗಿ ಶಾಂತಿ ಸಾಮರಸ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಅತ್ತ ಇಸ್ಲಾಮಿಕ್ ಸ್ಟೇಟ್ ಉಗ್ರರು ಮಾತ್ರ ಶಾಂತಿ ಕದಡುವ ಮತ್ತು ವಿಶಾನ ಮಾಡುವ ಕುರಿತು ಮಾತುಗಳನ್ನಾಡುತ್ತಿದ್ದಾರೆ...
ಢಾಕಾ ದಾಳಿ ಮತ್ತು ಇಸಿಸ್ (ಸಂಗ್ರಹ ಚಿತ್ರ)
ಢಾಕಾ ದಾಳಿ ಮತ್ತು ಇಸಿಸ್ (ಸಂಗ್ರಹ ಚಿತ್ರ)
Updated on

ಢಾಕಾ: ವಿಶ್ವಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಆಚರಣೆಯಲ್ಲಿ ತೊಡಗಿ ಶಾಂತಿ ಸಾಮರಸ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಅತ್ತ ಇಸ್ಲಾಮಿಕ್ ಸ್ಟೇಟ್ ಉಗ್ರರು ಮಾತ್ರ  ಶಾಂತಿ ಕದಡುವ ಮತ್ತು ವಿಶಾನ ಮಾಡುವ ಕುರಿತು ಮಾತುಗಳನ್ನಾಡುತ್ತಿದ್ದಾರೆ.

ರಂಜಾನ್ ಹಬ್ಬದ ಬೆನ್ನಲ್ಲೇ ವಿಶ್ವದ ಅತ್ಯಂತ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ (ಇಸಿಸ್) ನೂತನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ  ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಢಾಕಾ ಮೇಲಿನ ಉಗ್ರ ದಾಳಿ ಕೇವಲ ಟ್ರೇಲರ್ ಅಷ್ಟೇ..ಭವಿಷ್ಯದಲ್ಲಿ ಮತ್ತಷ್ಟು ಭೀಕರ ದಾಳಿಗೆ ಸಜ್ಜಾಗಿ ಎಂದು ಎಚ್ಚರಿಕೆ ನೀಡಿದೆ. ವಿಡಿಯೋದಲ್ಲಿ ಇಸಿಸ್  ಉಗ್ರಗಾಮಿ ಸಂಘಟನೆ ಬಾಂಗ್ಲಾದೇಶ ವಲಯದ ಉಗ್ರ ಕಮಾಂಡೋ ಅಬು ಇಸ್ಸಾ ಅಲ್‌ ಬಂಗಾಲಿ ಎಂಬಾತ ಮಾತನಾಡಿದ್ದು, 'ಢಾಕಾದಲ್ಲಿ ನಾವು ತೋರಿಸಿದ್ದು ಕೇವಲ ಝಲಕ್‌ ಮಾತ್ರ.  ಮುಂದೆ ಇನ್ನೂ ಭಾರೀ ಪ್ರಮಾಣದ ದಾಳಿಗಳನ್ನು ನಿರೀಕ್ಷಿಸಿ' ಎಂದು ಹೊಸ ಸವಾಲು ಹಾಕಿದ್ದಾನೆ.

ಬಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಿರುವ ಈತ, "ಬಾಂಗ್ಲಾದೇಶವು ಖಲೀಫಾ ರಾಷ್ಟ್ರದ ಕನಸು ಕಂಡಿರುವ ಇಸ್ಲಾಮಿಕ್‌ ಸಾಮ್ರಾಜ್ಯದ ಒಂದು ಭಾಗ. ಇಲ್ಲಿ ನಡೆಯಲಿರುವ ಜೆಹಾದ್‌ ಈ  ಹಿಂದಿನಂತೆ ಇರದು. ಇದನ್ನು ಬಾಂಗ್ಲಾದೇಶ ಸರ್ಕಾರ ಗಮನಿಸಬೇಕು" ಎಂದು ಆತ ಗುಡುಗಿದ್ದಾನೆ.

"ಭವಿಷ್ಯದಲ್ಲಿ ಢಾಕಾದಂತಹ ಇನ್ನಷ್ಟು ದಾಳಿಗಳು ಪುನರಾವರ್ತನೆಯಾಗಲಿವೆ. ವಿಶ್ವಾದ್ಯಂತ ಶರಿಯಾ ಕಾನೂನು ಜಾರಿಗೆ ಬರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಮುಸ್ಲಿಂ  ವಿರೋಧಿಗಳು ಸಂಪೂರ್ಣವಾಗಿ ನಾಶವಾಗುವ ತನಕ ಈ ರೀತಿಯ ದಾಳಿಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇಂದು ಮುಗ್ದ ಮುಸ್ಲಿಮರನ್ನು ಬಾಂಬ್ ದಾಳಿ ಮೂಲಕ ಯೋಧರು  ಹತ್ಯೆ ಮಾಡುತ್ತಿದ್ದಾರೆ. ಅಲ್ಲಾನ ನಿಯಮ ಬದಲಿಸಿ, ಮಾನವ ಯೋಜಿತ ನಿಯಮ ತಂದರೆ ಅವರು ನಮ್ಮ ದೃಷ್ಟಿಯಲ್ಲಿ ಕಾಫಿರ್‌ಗಳು. ಇದರ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯ. ಈ  ಕನಸನ್ನು ನನಸುಗೊಳಿಸಲು ಮುಸ್ಲಿಂ ಬಾಂಧವರು ಜಿಹಾದಿಗೆ ಕೈ ಜೋಡಿಸಬೇಕು ಎಂದು ವಿಡಿಯೋದಲ್ಲಿ ಅಬು ಇಸ್ಸಾ ಅಲ್‌ ಬಂಗಾಲಿ ಕರೆ ನೀಡಿದ್ದಾನೆ.

ಭದ್ರತಾ ಮೂಲಗಳ ಪ್ರಕಾರ ಅಬು ಇಸ್ಸಾ ಅಲ್‌ ಬಂಗಾಲಿ ರಾಖಾ ನಗರದಲ್ಲಿ ಈ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಶಂಕಿಸಲಾಗುತ್ತಿದ್ದು, ಖ್ಯಾತ ವಿಡಿಯೋ ವೆಬ್ ತಾಣಗಳಾದ  ಯೂಟ್ಯೂಬ್ ನಲ್ಲಿ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಅಬು ಇಸ್ಸಾ ಅಲ್‌ ಬಂಗಾಲಿ ಸೇರಿದಂತೆ ಇತರೆ ಇಬ್ಬರು ಇಸಿಸ್ ಮುಖಂಡರು ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ಢಾಕಾದ ಕೆಫೆ ಮೇಲೆ ನಡೆದ ಉಗ್ರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸೇರಿದಂತೆ ಕನಿಷ್ಠ 22 ಮಂದಿ ವಿದೇಶಿಯರು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com