26/11 ಮುಂಬೈ ಉಗ್ರ ದಾಳಿ ಪ್ರಕರಣದ ಬಗ್ಗೆ ಮತ್ತಷ್ಟು ಸಾಕ್ಷ್ಯ ಕೊಡಿ: ಭಾರತಕ್ಕೆ ಪಾಕ್ ಮತ್ತೆ ಮನವಿ

26/11 ಮುಂಬೈ ದಾಳಿ ಪ್ರಕರಣದಲ್ಲಿ ಮತ್ತೆ ಮೊಂಡುತನ ಪ್ರದರ್ಶಿಸಿರುವ ಪಾಕಿಸ್ತಾನ, ದಾಳಿಯಲ್ಲಿ ಪಾಕಿಸ್ತಾನದ ಉಗ್ರರ ಕೈವಾಡ ಇದೆ ಎಂಬ ಬಗ್ಗೆ ಮತ್ತಷ್ಟು ಸಾಕ್ಷ್ಯಗಳು ಬೇಕು ಎಂದು ಹೇಳಿದೆ.
26/11 ಮುಂಬೈ ಉಗ್ರ ದಾಳಿ
26/11 ಮುಂಬೈ ಉಗ್ರ ದಾಳಿ

ಇಸ್ಲಾಮಾಬಾದ್: 26/11 ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಮತ್ತೆ ಮೊಂಡುತನ ಪ್ರದರ್ಶಿಸಿರುವ ಪಾಕಿಸ್ತಾನ, ದಾಳಿಯಲ್ಲಿ ಪಾಕಿಸ್ತಾನದ ಉಗ್ರರ ಕೈವಾಡ ಇದೆ ಎಂಬ ಬಗ್ಗೆ ಮತ್ತಷ್ಟು ಸಾಕ್ಷ್ಯಗಳು ಬೇಕು ಎಂದು ಹೇಳಿದೆ.

ದಾಳಿಯ ಬಗ್ಗೆ ಹೆಚ್ಚಿನ ಸಾಕ್ಷ್ಯಗಳನ್ನು ಕೇಳಿರುವ ಬಗ್ಗೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ನಫೀಜ್ ಝಕಾರಿಯಾ, " ಹೆಚ್ಚಿನ ಸಾಕ್ಷ್ಯವನ್ನು ಕೇಳಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ ಭಾರತದ ಅಧಿಕಾರಿಗಳಿಗೆ ಪಾತ್ರ ಬರೆದಿದ್ದು 26/11 ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಉಗ್ರರು ಶಾಮೀಲಾಗಿರುವುದರ ಬಗ್ಗೆ ಹೆಚ್ಚಿನ ಸಾಕ್ಷ್ಯ ನೀಡಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬೈ ದಾಳಿಯ ಪ್ರಕರಣವನ್ನು ಪಾಕಿಸ್ತಾನ ಖಂಡಿತವಾಗಿಯೂ ತಾರ್ಕಿಕ ಅಂತ್ಯ ಮುಟ್ಟಿಸುತ್ತದೆ ಎಂದು ಭರವಸೆ ನೀಡಿರುವ ನಫೀಜ್ ಝಕಾರಿಯಾ, ಪಾಕಿಸ್ತಾನ ಬರೆದಿರುವ ಪತ್ರಕ್ಕೆ ಭಾರತದಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.

26/11 ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಈಗಾಗಲೇ ಏಳು ಲಷ್ಕರ್-ಎ- ತಯ್ಬಾ ಉಗ್ರ ಸಂಘಟನೆಯ ಉಗ್ರರನ್ನು ಬಂಧಿಸಿದೆ. ಇದರೊಂದಿಗೆ ದಾಳಿಯ ರೂವಾರಿಯಾಗಿದ್ದ ಉಗ್ರ ಝಕಿ ಉರ್‌ ರೆಹಮಾನ್‌ ಲಖ್ವಿ ನನ್ನ ಬಂಧಿಸಲಾಗಿತ್ತಾದರೂ. ಈಗ ಜೈಲಿನಿಂದ ಬಿಡುಗಡೆಯಾಗಿರುವ ಉಗ್ರ ಲಖ್ವಿ, ಪಾಕಿಸ್ತಾನದಲ್ಲಿ ಅಜ್ಞಾತ ಸ್ಥಳದಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಮುಂಬೈ ದಾಳಿಯ ಪ್ರಕರಣದ ವಿಚಾರಣೆಯನ್ನು ಶೀಘ್ರವೇ ಪೂರ್ಣಗೊಳಿಸಿ ಉಗ್ರರಿಗೆ ಶಿಕ್ಷೆ ನೀಡುವಂತೆ ಭಾರತ ನಿರಂತರವಾಗಿ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದ್ದರೂ ಈಗ ಪಾಕಿಸ್ತಾನ ಮತ್ತೆ ಹೆಚ್ಚಿನ ಸಾಕ್ಷ್ಯಗಳಿಗಾಗಿ ಬೇಡಿಕೆ ಇಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com