ಸತ್ತ ಪತ್ನಿ 2 ವರ್ಷಗಳ ಬಳಿಕ ಟಿವಿಯಲ್ಲಿ ಪ್ರತ್ಯಕ್ಷ..!

2 ವರ್ಷಗಳ ಹಿಂದೆ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿ ಸ್ವತಃ ಗಂಡನೇ ಸಮಾಧಿ ಮಾಡಿದ್ದ ಪತ್ನಿ ಇದ್ದಕ್ಕಿದ್ದಂತೆಯೇ ಟಿವಿಯಲ್ಲಿ ಪ್ರತ್ಯಕ್ಷವಾದ ನಿಗೂಢ ಪ್ರಕರಣವೊಂದು ಮೊರೋಕ್ಕೋದಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊರಾಕ್ಕೋ: 2 ವರ್ಷಗಳ ಹಿಂದೆ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿ ಸ್ವತಃ ಗಂಡನೇ ಸಮಾಧಿ ಮಾಡಿದ್ದ ಪತ್ನಿ ಇದ್ದಕ್ಕಿದ್ದಂತೆಯೇ ಟಿವಿಯಲ್ಲಿ ಪ್ರತ್ಯಕ್ಷವಾದ ನಿಗೂಢ ಪ್ರಕರಣವೊಂದು  ಮೊರೋಕ್ಕೋದಲ್ಲಿ ನಡೆದಿದೆ.

ಮೊರೋಕ್ಕೋ ದ ಅಝಿಲಾಲ್‌ ಎಂಬಲ್ಲಿನ ನಿವಾಸಿ ಅಬ್ರಾಗ್‌ ಮೊಹಮ್ಮದ್‌ ಎಂಬವರು ಎರಡು ವರ್ಷಗಳ ಹಿಂದೆ ಅಂದರೆ 2014ರಲ್ಲಿ ನಡೆದ ಕಾರು ಅಪಘಾತದಲ್ಲಿ ತಮ್ಮ ಪತ್ನಿಯನ್ನು  ಕಳೆದುಕೊಂಡಿದ್ದರು. ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಸಮೀಪದ ಕಾಸಾಬ್ಲಾಂಕಾ ದ ರಾಕ್ಡ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ತೀವ್ರ ಗಂಭೀರವಾಗಿ  ಗಾಯಗೊಂಡಿದ್ದ ಆಕೆ ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ. ಬಹುಷಃ ಆಕೆ ಸಾಯಬಹುದು ಎಂದು ಅಲ್ಲಿನ ವೈದ್ಯರು ಹೇಳಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು  ಬಿಟ್ಟು, ಆಸ್ಪತ್ರೆಯ ಬಿಲ್‌ ಕಟ್ಟಿ, ಮೊಹಮ್ಮದ್‌ ಅವರು ಪರ್ವತ ಪ್ರದೇಶದಲ್ಲಿನ ತಮ್ಮ ಮನೆಗೆ ಹೋಗಿದ್ದರು.

ಅಷ್ಟರಲ್ಲಿ ಅವರಿಗೆ ಕರೆ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ನಿಮ್ಮ ಮಡದಿ ತೀರಿಕೊಂಡಿದ್ದಾಳೆ. ಬೇಗ ಬನ್ನಿ ಎಂದು ಹೇಳಿದರು. ತಕ್ಷಣ ಆಸ್ಪತ್ರೆಗೆ ಧಾವಿಸಿದ ಮೊಹಮ್ಮದ್‌, ಆಸ್ಪತ್ರೆ ಸಿಬಂದಿಗಳು  ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಪತ್ನಿಯ ಶವವನ್ನು ಪಡೆದುಕೊಂಡು ಅದನ್ನು ಅಲ್ಲೇ ಸಿದ್ಧವಿದ್ದ ಶವದ ಪೆಟ್ಟಿಗೆಗೆ ಹಾಕಿ ಸ್ಮಶಾಣಕ್ಕೆ ಒಯ್ದು ಅಂತ್ಯಕ್ರಿಯೆ ನಡೆಸಿದರು.

ಇದಾಗಿ 2 ವರ್ಷಗಳ ಬಳಿತ ಮೊಹಮ್ಮದ್‌ನ ಸ್ನೇಹಿತರು ಟಿವಿ ಕಾರ್ಯಕ್ರಮವೊಂದರಲ್ಲಿ ಮೊಹಮ್ಮದ್‌ನ ಪತ್ನಿಯನ್ನು ಕಂಡು ಆಶ್ಚರ್ಯಗೊಂಡರು. ಮೊಹಮ್ಮದ್‌ನ ಪತ್ನಿಯು ಟಿವಿ ವೀಕ್ಷಕರಿಗೆ ತನ್ನ  ಪತಿಯನ್ನು ಹುಡುಕಿಕೊಡಲು ಮನವಿ ಮಾಡುತ್ತಿದ್ದಳು ! ಕೂಡಲೇ ಮೊಹಮದ್ ಅವರಿಗೆ ಕರೆ ಮಾಡಿದ ಸ್ನೇಹಿತರು ವಿಚಾರ ತಿಳಿಸಿದರು. ಮೊಹಮ್ಮದ್‌ ಕೂಡ ಆ ಟಿವಿ ಕಾರ್ಯಕ್ರಮವನ್ನು ನೋಡಿ  ಅಲ್ಲಿ ತಮ್ಮ ಪತ್ನಿಯನ್ನು ಕಂಡು ಆಕೆ ಇನ್ನೂ ಜೀವಂತ ಇರುವುದನ್ನು ತಿಳಿದು ಅತೀವ ಆಶ್ಚರ್ಯಪಟ್ಟರು.

ಅಲ್‌ ಮುಖ್ತಫೌನ್‌ ಟಿವಿ ಕಾರ್ಯಕ್ರಮದಲ್ಲಿ ನಡೆದ ಈ ಪವಾಡ ಸದೃಶ ಘಟನೆಯು ಸಾಮಾಜಿಕ ಜಾಲ ತಾಣದಲ್ಲೂ ಚರ್ಚಿತವಾಗುತ್ತಿದೆ.

ಕಾರು ಅಪಘಾತದಲ್ಲಿ "ಮೃತಪಟ್ಟ' ಪತ್ನಿಯನ್ನು ತಾನೇ ಖುದ್ದು ಸಮಾಧಿ ಮಾಡಿದ್ದು, ಆಕೆ ಜೀವಂತವಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೊಹಮ್ಮದ್‌ ಅವರನ್ನು ಕಾಡುತ್ತಿದ್ದು, ಬಹುಶಃ  ತನಗೆ  ಆಸ್ಪತ್ರೆಯಲ್ಲಿ ಕೊಡಲಾಗಿದ್ದ "ಪತ್ನಿಯ ಮೃತದೇಹ' ಅದಲು ಬದಲಾಗಿದ್ದೇ ಈ ಯಡವಟ್ಟಿಗೆ ಕಾರಣವಾಗಿರಬಹುದೇ ಎಂದು ಮೊಹಮದ್ ಆಲೋಚಿಸುತ್ತಿದ್ದಾನೆ. ಮತ್ತೊಂದೆಡೆ ಈ ಪ್ರಕರಣ  ಕುರಿತಂತೆ ಒಬ್ಬೊಬ್ಬರ ಬಾಯಿಯಲ್ಲಿ ಒಂದೊಂದು ರೀತಿಯ ಕಥೆಗಳು ಹುಟ್ಟುತ್ತಿದ್ದು, ಕೆಲವರ ಪ್ರಕಾರ ಮೊಹಮ್ಮದ್‌ಗೆ ಮರೆವು ರೋಗ ಇರುವುದೇ ಇಷ್ಟೆಲ್ಲ ಅಧ್ವಾನಕ್ಕೆ ಕಾರಣವಾಗಿದೆ ಎಂದು  ಕೂಡ ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com