ಇಸ್ಲಾಮಾಬಾದ್: ಪಾಕಿಸ್ತಾನದ ಅಣು ಯೋಜನೆಯ ಮುಖ್ಯಸ್ಥರಾಗಿದ್ದ ಡಾ.ಅಬ್ದುಲ್ ಖಾದಿರ್ ಖಾನ್ ಮತ್ತೊಮ್ಮೆ ಭಾರತದ ಬಗ್ಗೆ ಹೇಳಿಕೆ ನೀಡಿದ್ದು, ರಾವಲ್ಪಿಂಡಿಯಿಂದ ದೆಹಲಿಯ ಮೇಲೆ ಗುರಿಯಿಡುವುದು ಪಾಕಿಸ್ತಾನಕ್ಕೆ ಕೇವಲ 5 ನಿಮಿಷಗಳ ಕೆಲಸ ಎಂದು ಹೇಳಿದ್ದಾರೆ.
ಇರಾನ್ ಗೆ ಅಣ್ವಸ್ತ್ರಗಳ ಗೌಪ್ಯತೆಯನ್ನು ಅಕ್ರಮವಾಗಿ ನೀಡಿರುವ ಆರೋಪ ಎದುರಿಸುತ್ತಿರುವ ಅಬ್ದುಲ್ ಖಾನ್, ಪಾಕಿಸ್ತಾನ ಮೊದಲ ಬಾರಿ ಅಣು ಪರೀಕ್ಷೆ ನಡೆಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪಾಕಿಸ್ತಾನ 1984 ರಲ್ಲೇ ಅಣ್ವಸ್ತ್ರ ರಾಷ್ಟ್ರವಾಗುತ್ತಿತ್ತು. ಆದರೆ ಅಂದಿನ ಅಧ್ಯಕ್ಷರಾಗಿದ್ದ ಜಿಯಾ-ಉಲ್-ಹಕ್ ಅಣು ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. ಪಾಕ್ ಅಣು ಪರೀಕ್ಷೆ ನಡೆಸಿದರೆ ವಿಶ್ವದ ಅನ್ಯ ರಾಷ್ಟ್ರಗಳ ಸೇನೆ ಮಧ್ಯ ಪ್ರವೇಶಿಸಬಹುದು ಎಂದು ಜಿಯಾ-ಉಲ್-ಹಕ್ ನಂಬಿದ್ದೆ ಕಾರಣ ಎಂದಿದ್ದಾರೆ. ಅಷ್ಟೇ ಅಲ್ಲದೇ ರಾವಲ್ಪಿಂಡಿಯಿಂದ ದೆಹಲಿಗೆ ಗುರಿ ಇಡುವುದು ಪಾಕಿಸ್ತಾನಕ್ಕೆ ಕೇವಲ 5 ನಿಮಿಷಗಳ ಕೆಲಸವಾಗಿದೆ ಎಂದು ಎಚ್ಚರಿಸಿದ್ದಾರೆ.
ಅಣು ಪ್ರಸರಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ವಿಜ್ಞಾನಿಯಾಗಿದ್ದ ಅಬ್ದುಲ್ ಖಾದಿರ್ ಖಾನ್ ಗೆ ಒತ್ತಾಯ ಬಂದಿದ್ದರಿಂದ ಅವರನ್ನು 2004 ರಲ್ಲಿ ಪದಚ್ಯುತಗೊಳಿಸಲಾಗಿತ್ತು.
Advertisement