ನವದೆಹಲಿ: ಪಠಾಣ್ ಕೋಟ್ ಉಗ್ರಗಾಮಿ ದಾಳಿಗೆ ಸಂಬಂಧಪಟ್ಟಂತೆ ಜಂಟಿ ತನಿಖೆ ನಡೆಸಲು ಪಾಕಿಸ್ತಾನ ಪ್ರಸ್ತಾಪ ಮುಂದಿಟ್ಟರೂ ಕೂಡ ಭಾರತ ಮಾತುಕತೆಯಿಂದ ತಪ್ಪಿಸಿಕೊಂಡು ಹೋಗುತ್ತಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಆರೋಪಿಸಿದ್ದಾರೆ.
ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದ ಅವರು, ಇದು ಎರಡು ದೇಶಗಳ ವಿಭಜನೆಯ ಅಪೂರ್ಣ ಅಜೆಂಡಾವಾಗಿದ್ದು, ಧಾರ್ಮಿಕ ಗೊಂದಲಕ್ಕೆ ಮುಖ್ಯ ಕಾರಣವಾಗಿದೆ ಎಂದರು.
ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಆರಂಭಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದರೂ ಕೂಡ ಮತ್ತು ಪಠಾಣ್ ಕೋಟ್ ದಾಳಿಗೆ ಸಂಬಂಧಪಟ್ಟಂತೆ ಜಂಟಿ ತನಿಖೆಗೆ ಪಾಕಿಸ್ತಾನ ಪ್ರಸ್ತಾಪ ಮುಂದಿಟ್ಟರೂ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಪಡಿಸಲಾಗಿದೆ. ಪಾಕಿಸ್ತಾನಕ್ಕೆ ಈ ಬಗ್ಗೆ ಬೇಸರವಿದೆ ಎಂದು ಹುಸೇನ್ ಹೇಳಿದ್ದಾರೆ.
ಎರಡು ದೇಶಗಳ ನಡುವಣ ಗೊಂದಲಕ್ಕೆ ಮುಖ್ಯ ಕಾರಣ ಕಾಶ್ಮೀರ ವಿಷಯ. ಉಪ ಖಂಡದ ವಿಭಜನೆಯ ಮುಗಿಯದ ಅಜೆಂಡಾ ಆಗಿದೆ. ಕಾಶ್ಮೀರ ಜನರ ಆಶಯದಂತೆ ಮತ್ತು ವಿಶ್ವ ಸಂಸ್ಥೆಯ ನಿರ್ಣಯದಂತೆ ಕಾಶ್ಮೀರ ವಿವಾದವನ್ನು ಬಗೆಹರಿಸದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ.
ಪಾಕಿಸ್ತಾನ ಶಾಂತಿಪ್ರಿಯ ರಾಷ್ಟ್ರ ಮತ್ತು ಅದರ ವಿದೇಶಾಂಗ ನೀತಿ ಎಲ್ಲ ದೇಶಗಳೊಂದಿಗೆ ಸ್ನೇಹ ಮತ್ತು ಸಹೋದರತ್ವದ ಮೇಲೆ ನಿಂತಿದೆ. ಯಾವ ದೇಶಗಳೊಂದಿಗೂ ಆಕ್ರಮಣವನ್ನು ಪಾಕಿಸ್ತಾನ ಬಯಸುವುದಿಲ್ಲ ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ವಿಷಯಗಳಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳಲು ನಮ್ಮ ದೇಶ ಬಯಸುತ್ತದೆ ಎಂದು ಹೇಳಿದರು.
ಪಾಕಿಸ್ತಾನ ಪ್ರಜಾಪ್ರಭುತ್ವದ ತತ್ವದ ಮೇಲೆ ನಂಬಿಕೆಯಿಟ್ಟಿದೆ. ಪ್ರಜಾಪ್ರಭುತ್ವವಿಲ್ಲದೆ ಸಮರ್ಥನೀಯ ಪ್ರಗತಿ ಮತ್ತು ಸ್ಥಿರತೆಯಿರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
Advertisement