ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಗೆ ಬಲೂಚಿಸ್ತಾನ ನಾಯಕರಿಂದಲೇ ಬೆಂಬಲಗಳು ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದ ವಿರುದ್ಧವೇ ಸೀಮಿತ ದಾಳಿ ನಡೆಸುವ ಅಗತ್ಯವಿದೆ ಎಂದು ಬಲೂಚಿಸ್ತಾನ ಮಹಿಳಾ ಫೋರಂ ಅಧ್ಯಕ್ಷೆ ನಾಯಿಲಾ ಕ್ವಾದ್ರಿ ಅವರು ಬುಧವಾರ ಹೇಳಿದ್ದಾರೆ.
ಪಾಕಿಸ್ತಾನ ದೇಶದ ಆಡಳಿತ ನಡೆಸುತ್ತಿರುವ ನಾಯಕರು ಶಾಂತಿಯುತ ಪ್ರತಿಭಟನೆಗಳು, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ನಂಬುವುದಿಲ್ಲ. ಉಗ್ರರ ಬೆಂಬಲಕ್ಕೆ ನಿಂತಿರುವ ಪಾಕಿಸ್ತಾನದ ವಿರುದ್ಧವೇ ಭಾರತೀಯ ಸೇನೆ ಸೀಮಿತ ದಾಳಿ ನಡೆಸುವ ಅಗತ್ಯವಿದೆ. ಇತರೆ ದೇಶಗಳ ಮೇಲೆ ಯುದ್ಧಕ್ಕೆ ಹೋದರೆ ಪಾಕಿಸ್ತಾನ ಎಂದಿಗೂ ಗೆಲವು ಸಾಧಿಸಲು ಸಾಧ್ಯವಿಲ್ಲ. ಬಲೂಚಿಸ್ತಾನದ ಮೇಲೆ ಯುದ್ಧ ಮಾಡಿದರೂ ಪಾಕಿಸ್ತಾನ ಗೆಲಲ್ಲು ಸಾಧ್ಯವಿಲ್ಲ. ಯಾವುದೇ ಯುದ್ಧಕ್ಕೆ ಹೋಗಬೇಕಾದರೂ ಗೆಲವು ಸಾಧಿಸಬೇಕಾದರೆ ಪಾಕಿಸ್ತಾನಕ್ಕೆ ಚೀನಾದ ಬೆಂಬಲವನ್ನು ಕೇಳುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಸೂಚಿಸಿರುವ ಅವರು, ಬಲೂಚಿಸ್ತಾನದ ವಿಚಾರ ಕುರಿತಂತೆ ಪ್ರಧಾನಿ ಮೋದಿ ಹಾಗೂ ಸುಷ್ಮಾ ಸ್ವರಾಜ್ ವಿಶ್ವದ ಗಮನವನ್ನು ಸೆಳೆಯುತ್ತಿದ್ದಾರೆ. ಇದಕ್ಕೆ ಅವರಿಗೆ ಧನ್ಯವಾದಗಳನ್ನು ಸೂಚಿಸುತ್ತೇನೆ. ಈಗಾಗಲೇ ಭಾರತೀಯ ನಾಯಕರು ಬಲೂಚಿಸ್ತಾನಕ್ಕೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಂಬಲವನ್ನು ಸೂಚಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮತ್ತಷ್ಟು ಬೆಂಬಲ ಕೋರಿ ಶೀಘ್ರದಲ್ಲಿಯೇ ಭಾರತೀಯ ನಾಯಕರನ್ನು ಭೇಟಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Advertisement