ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ಹೃದಯಾಘಾತದಿಂದ ನಿಧನ

ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ಅವರು ಗುರುವಾರ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ (ಸಂಗ್ರಹ ಚಿತ್ರ)
ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ಅವರು ಗುರುವಾರ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

67 ವರ್ಷದ ಅಲೆಕ್ಸಾಂಡರ್ ಕಡಕಿನ್ ಅವರು ಇಂದು ಬೆಳಗ್ಗೆ ಬರವಣಿಗೆಯಲ್ಲಿ ತೊಡಗಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರ ಸಾವಿನ ಕುರಿತಂತೆ ಅವರ ಕಚೇರಿ ಮೂಲಗಳು ಯಾವುದೇ  ಮಾಹಿತಿ ನೀಡಿಲ್ಲ. ಈ ಹಿಂದೆಯೂ ಕೂಡ ಕಡಕಿನ್ ಅವರು ಸಾಕಷ್ಟು ಬಾರಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಅದನ್ನು ರಷ್ಯಾ ಪರವಾಗಿ ಸಮರ್ಥಿಸಿಕೊಂಡಿದ್ದ ಕಡಕಿನ್ ಅವರು, ಯಾವುದೇ ದೇಶಕ್ಕೆ ತನ್ನ ಬಾಹ್ಯ ಬೆದರಿಕೆಗಳನ್ನು ನಿರ್ವಹಿಸುವ  ಅಥವಾ ನಿಗ್ರಹಿಸುವ ಹಕ್ಕಿದೆ ಎಂದು ಹೇಳಿದ್ದರು. ಅಂತೆಯೇ ಭಾರತದಲ್ಲಿ ನಡೆಯುತ್ತಿರುವ ಬಹುತೇಕ ಉಗ್ರ ದಾಳಿಗಳಿಗೆ ಪಾಕಿಸ್ತಾನ ಮೂಲದ ಉಗ್ರರೇ ಕಾರಣ ಎಂದು ಹೇಳಿದ್ದರು. ಅಂತೆಯೇ  ಈ ಹಿಂದೆ ರಷ್ಯಾ ದೇಶ ಪಾಕಿಸ್ತಾನ  ಸೇನೆಯೊಂದಿಗೆ ಸಮರಾಭ್ಯಾಸ ನಡೆಸಿದ್ದಾಗ ಭಾರತ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಆಗ ಭಾರತವನ್ನು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿಯಲ್ಲಿ ಸಮಾಧಾನ ಪಡಿಸಿದ್ದ ಕಡಕಿನ್ ಅವರು, ರಷ್ಯಾ ಮತ್ತು ಪಾಕಿಸ್ತಾನ ಜಂಟಿ  ಸಮರಾಭ್ಯಾಸವನ್ನು ಭಾರತ ಶಂಕಿಸುವ ಅಗತ್ಯವಿಲ್ಲ.

ಪಾಕಿಸ್ತಾನ ಸೇನೆಗೆ ಉಗ್ರರನ್ನು ನಿಗ್ರಹಿಸುವ ಕುರಿತು ಒಂದಷ್ಟು ಸಲಹೆ ನೀಡಲಾಗಿತ್ತು, ಭಾರತ ಕೂಡ ಉಗ್ರ ನಿಗ್ರಹವನ್ನೇ ಬಯಸುತ್ತದೆ, ಭಾರತದ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ಕಾರ್ಯಾಚರಣೆಯನ್ನೂ ರಷ್ಯಾ  ನಡೆಸುವುದಿಲ್ಲ ಎಂದು ಕಡಕಿನ್ ಭರವಸೆ ನೀಡಿದ್ದರು.

ರಷ್ಯಾ ರಾಯಭಾರಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com