ನ್ಯೂಯಾರ್ಕ್: ಶಾಂತಿಯ ಸಂಸ್ಕೃತಿ ಎಂಬ ವಿಷಯದ ಕುರಿತು ನಿನ್ನೆ ವಿಶ್ವಸಂಸ್ಥೆಯಲ್ಲಿ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿದ ಭಾರತ, ಪಾಕಿಸ್ತಾನ ಭಯೋತ್ಪಾದಕ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಸ್ವರ್ಗವೆನಿಸಿದೆ ಎಂದು ತನ್ನ ಆಕ್ರೋಶವನ್ನು ಮತ್ತೆ ವ್ಯಕ್ತಪಡಿಸಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ರಾಷ್ಟ್ರ ನೀತಿಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತ ಹೇಳಿದೆ.
ತಮ್ಮ ತೀಕ್ಷ್ಣ ಭಾಷಣದಲ್ಲಿ, ನ್ಯೂಯಾರ್ಕ್ ಮೂಲದ ಭಾರತದ ಶಾಶ್ವತ ಮಿಷನ್ ಸಚಿವ ಎಸ್.ಶ್ರೀನಿವಾಸ್ ಮಾತನಾಡಿ, ಜಮ್ಮು-ಕಾಶ್ಮೀರ ಯಾವತ್ತಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂದು ಪಾಕಿಸ್ತಾನಕ್ಕೆ ಮತ್ತೊಮ್ಮೆ ನೆನಪು ಮಾಡಿಕೊಡುತ್ತೇನೆ. ಪಾಕಿಸ್ತಾನ ಕೂಡ ಇದಕ್ಕೆ ಸಮನ್ವಯ ತೋರಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಶಾಂತಿಯ ಸಂಸ್ಕೃತಿ ಶಾಂತಿಯನ್ನು ಗುರುತಿಸುತ್ತದೆ. ಅಂತರ ದೇಶ ಬಾಂಧವ್ಯಗಳು ಉತ್ತಮ ನೆರೆ ದೇಶಗಳು, ಪರಸ್ಪರ ಗೌರವ ಮತ್ತು ಮತ್ತೊಬ್ಬರ ವಿಷಯದಲ್ಲಿ ಮಧ್ಯ ಪ್ರವೇಶಿಸದಿರುವುದನ್ನು ಕೂಡ ಒಳಗೊಂಡಿರುತ್ತದೆ. ನಮ್ಮ ನೆರೆ ದೇಶ ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗ ಸುಖವಾಗಿದೆ. ಅದು ತನ್ನ ದೇಶದ ನೀತಿಗೆ ಭಯೋತ್ಪಾದನೆಯ ಅಸ್ತ್ರವನ್ನು ಬಳಸುತ್ತಿರುವುದು ದುರಂತ ಎಂದು ಹೇಳಿದರು.
ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ತಮಗೆ ಏನು ಬೇಕು ಎಂದು ಕೇಳಲು ಇಲ್ಲಿನ ಜನರಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಇಲ್ಲಿ ತೀವ್ರಗಾಮಿಗಳು ಮತ್ತು ಮೂಲಭೂತವಾದಿಗಳು ಜನರನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಅಹಿಂಸೆಯ ಮೂಲಕ ಶಾಂತಿಯನ್ನು ಪ್ರಚಾರ ಮಾಡುವುದು ಇಲ್ಲಿ ಮುಖ್ಯವಾಗಿದೆ ಎಂದು ಶ್ರೀನಿವಾಸ್ ಹೇಳಿದರು.
Advertisement