ಕೇರಳ ನಮ್ಮ ಯಶಸ್ಸಿನ ಮೂಲ, ಸಂಕಷ್ಟದಲ್ಲಿ ನೆರವಾಗುವುದು ನಮ್ಮ ಕರ್ತವ್ಯ: ಯುಎಇ

ಕೇರಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದೇಶ ಮಾತ್ರವಲ್ಲದೇ ವಿಶ್ವದ ಗಮನವನ್ನೂ ಕೂಡ ಸೆಳೆದಿದ್ದು, ಪ್ರವಾಹ ಪೀಡಿತ ಕೇರಳಕ್ಕೆ ನೆರವು ನೀಡುವುದಾಗಿ ಯುಎಇ ಸರ್ಕಾರ ಘೋಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಬುದಾಬಿ: ಕೇರಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದೇಶ ಮಾತ್ರವಲ್ಲದೇ ವಿಶ್ವದ ಗಮನವನ್ನೂ ಕೂಡ ಸೆಳೆದಿದ್ದು, ಪ್ರವಾಹ ಪೀಡಿತ ಕೇರಳಕ್ಕೆ ನೆರವು ನೀಡುವುದಾಗಿ ಯುಎಇ ಸರ್ಕಾರ ಘೋಷಿಸಿದೆ.
ಈ ಬಗ್ಗೆ ಸ್ವತಃ ಯುಎಇ ಅದ್ಯಕ್ಷರಾದ ಶೇಖ್ ಖಲೀಫಾ ಅವರು ಪ್ರತಿಕ್ರಿಯಿಸಿದ್ದು, ಕೂಡಲೇ ಕೇರಳ ನಿರಾಶ್ರಿತರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಲ್ಲದೆ ಈ ಸಂಬಂಧ ಸಮಿತಿಯೊಂದನ್ನು ರಚನೆ ಮಾಡುವಂತೆಯೂ ಸೂಚಿಸಿದ್ದಾರೆ ಎನ್ನಲವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಯುಎಇ ಉಪಾಧ್ಯಕ್ಷ ಶೇಖ್ ಮೊಹಮದ್ ಬಿನ್ ರಷೀದ್ ಅಲ್ ಮಕ್ತೌಮ್ ಅವರು, ಕೇರಳಕ್ಕೆ ಸಂಬಂಧಿಸಿದಂತೆ ನಮ್ಮ ರಾಷ್ಟ್ರ ವಿಶೇಷ ಕಾಳಜಿ ಹೊಂದಿದೆ. ಪ್ರವಾಹ ಪೀಡಿತ ಕೇರಳ ಸಂಕಷ್ಟದಲ್ಲಿದ್ದು, ನೆರವು ನಮ್ಮ ಕರ್ತವ್ಯ. ಕೇರಳ ನಮ್ಮ ಯಶಸ್ಸಿನ ಮೂಲ ಎಂದು ಅವರು ಹೇಳಿದ್ದಾರೆ.
ಹಿಂದಿನಿಂದಲೂ ಕೇರಳಿಗರು ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಕೂಡ ಗಣನೀಯ. ಹೀಗಾಗಿ ಕೇರಳಕ್ಕೆ ನೆರವು ನೀಡುವುದು ನಮ್ಮ ಜವಾಬ್ದಾರಿ ಎಂದು ನಾವು ಭಾವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಜಲ ಪ್ರಳಯದಿಂದ ತತ್ತರಿಸಿದ ಕೇರಳಕ್ಕೆ ನೆರವಿನ ಮಹಾಪೂರ
ಶತಮಾನದ ಅತ್ಯಂತ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಈವರೆಗೂ 324  ಮಂದಿ ಬಲಿಯಾಗಿದ್ದು, 1924ರಿಂದ ಆಚೆಗೆ ದಾಖಲಾದ ಅತೀ ಭೀಕರ ಮಟ್ಟದ ಪ್ರವಾಹದ ಪರಿಸ್ಥಿತಿ ಇದಾಗಿದೆ. 500 ಕೋಟಿ ರುಗಳ ತುರ್ತು ಪರಿಹಾರವನ್ನು ಪ್ರಧಾನಿ ಅದಾಗಲೇ ಘೋಷಿಸಿದ್ದಾರೆ. ರಾಜ್ಯದ 12 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಇದೀಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತೊಮ್ಮೆ ಕೆಂಪು ಅಲರ್ಟ್‌ ಘೋಷಿಸಿದ್ದಾರೆ.
ಇನ್ನು ಆಪರೇಷನ್‌ ಮದದ್‌ ಹಾಗು ಆಪರೇಷನ್‌ ರಾಹತ್‌ ಮೂಲಕ ಭಾರೀ ಮಟ್ಟದ ವಿಪತ್ತು ನಿರ್ವಹಣಾ ಕಾರ್ಯಾಚರಣೆಗೆ ಸೇನೆ ಹಾಗು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಮುಂದಾಗಿವೆ. ಕೇರಳಕ್ಕೆ 25 ಕೋಟಿ ರುಗಳ ಪರಿಹಾರ ಮೊತ್ತವನ್ನು ತೆಲಂಗಾಣ ಸರಕಾರ ಘೋಷಣೆ ಮಾಡಿದೆ. ಇದೇ ವೇಳೆ ಪಂಜಾಬ್‌ ಹಾಗು ದೆಹಲಿ ಸರ್ಕಾರಗಳು ತಲಾ ಹತ್ತು ಕೋಟಿ ರುಗಳ ನೆರವನ್ನು ಘೋಷಣೆ ಮಾಡಿವೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 10 ಕೋಟಿ ರುಗಳ ಪರಿಹಾರದ ನೆರವು ಘೋಷಿಸಿದ್ದಾರೆ. ಅಂತೆಯೇ ದೇಶದ ಅತೀ ದೊಡ್ಡ ಬ್ಯಾಕಿಂಗ್ ಸಂಸ್ಥೆ ಎಸ್ ಬಿಐ ಕೂಡ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ನೀಡುವುದಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com