ಇಸ್ಲಾಮಾಬಾದ್: ಕಾಶ್ಮೀರ ವಿಷಯದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರ್ ಬಾದಿನ ಮಿಲಿಟರಿ ಆಸ್ಪತ್ರೆ ಹಾಗೂ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿಗೆ ಭೇಟಿ ನೀಡಿದ ವೇಳೆಯಲ್ಲಿ ಜಾವೇದ್ ಬಜ್ವಾ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಪಾಕ್ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಏನೇ ಆದರೂ ಕಾಶ್ಮೀರ ವಿಷಯದಲ್ಲಿ ರಾಜಿ ಆಗುವುದಿಲ್ಲ, ಶಾಂತಿಗಾಗಿನ ನಮ್ಮ ಸಹನೆಯನ್ನು ಎಂದಿಗೂ ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು ಎಂದು ಅವರು ಭಾರತಕ್ಕೆ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ನಮ್ಮ ತಾಯಿನಾಡಿನ ರಕ್ಷಣೆಗಾಗಿ ಯಾವುದೇ ಆಕ್ರಮಣವನ್ನು ತಡೆಯಲು ನಾವು ಸಮರ್ಥ ಮತ್ತು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ ನಲ್ಲಿ ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಭಾರತ ಸರ್ಕಾರದ ನಡೆ ವಿರುದ್ಧ ಪಾಕಿಸ್ತಾನ ಆಕ್ರೋಶಗೊಂಡಿದ್ದು, ಭಾರತದೊಂದಿಗೆ ರಾಯಬಾರಿ ಸಂಬಂಧ ಕಡಿದುಕೊಂಡಿದ್ದು, ಭಾರತದ ಹೈ ಕಮೀಷನರ್ ಅವರನ್ನು ಉಚ್ಚಾಟಿಸಿದೆ
Advertisement