ಮಸೂದ್ ಅಜರ್
ಮಸೂದ್ ಅಜರ್

ಮಸೂದ್ ಅಜರ್ ಜಾಗತಿಕ ಉಗ್ರ ವಿಚಾರ: ಚರ್ಚೆಯ ಬಳಿಕ ಇತ್ಯರ್ಥಕ್ಕೆ ಚೀನಾ ಮನವಿ

ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜಾಗತಿಕ...
Published on
ನವದೆಹಲಿ/ಬೀಜಿಂಗ್‌: ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಮುನ್ನ ನಿಯಮಾವಳಿಗಳನ್ನು ಪಾಲಿಸಬೇಕು ಮತ್ತು ಜವಾಬ್ದಾರಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಚೀನಾ ಪ್ರತಿಪಾದಿಸಿದೆ.
"ಚೀನಾ ಒಂದು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದು, ಸಮಿತಿಯ ಕಾರ್ಯವಿಧಾನದ ನಿಯಮಗಳನ್ನು ಅನುಸರಿಸುತ್ತದೆ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದೆ ಹಾಗೂ ಚರ್ಚೆಯ ಮೂಲಕ ಮಾತ್ರ ನಾವು ಜವಾಬ್ದಾರಿಯುತ ಪರಿಹಾರ ಕಂಡುಕೊಳ್ಳಬಹುದು” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಬೀಜಿಂಗ್‌ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ವಿಶ್ವಸಂಸ್ಥೆಯ ಪ್ರಮುಖ ಅಂಗವಾದ ಭದ್ರತಾ ಮಂಡಳಿಯು ಕಠಿಣ ಮಾನದಂಡ ಹಾಗೂ ನಿಯಮಗಳನ್ನು ಹೊಂದಿದೆ.  ಹೀಗಾಗಿ ಸರಿಯಾಧ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ” ಎಂದು ಲು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ.
ಪುಲ್ವಾಮಾ ದಾಳಿಯ ನಂತರ, ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ವಿಶ್ವಸಂಸ್ಥೆಯ ಭದ್ರತಾ,ಮಂಡಳಿಗೆ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಹೊಸ ಪ್ರಸ್ತಾವನೆ ಸಲ್ಲಿಸಿವೆ.  ಆದರೆ ಚೀನಾ ಈ ಕುರಿತು ಇನ್ನೂ ತನ್ನ ನಿರ್ಧಾರ ಹೊರಹಾಕಿಲ್ಲ.  ಆದರೆ ಇಂತಹ ನಿರ್ಧಾರವನ್ನು ಚೀನಾ ಈ ಹಿಂದೆ ಮೂರು ಬಾರಿ ನಿರ್ಬಂಧಿಸಿತ್ತು.
ಚೀನಾದ ಉಪ ವಿದೇಶಾಂಗ ಸಚಿವ ಕಾಂಗ್ ಕ್ಸಾನ್ಯು ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಜ್ವಾ ಜತೆ ಮಾತುಕತೆ ನಡೆಸಿದ್ದಾರೆ.  ಆದರೆ ಚರ್ಚೆಯ  ವಿವರ ಇನ್ನೂ ಬಹಿರಂಗಗೊಂಡಿಲ್ಲ.  
ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಸೂದ್ ಅಜರ್ ವಿಚಾರದಲ್ಲಿ ಧನಾತ್ಮಕ ನಡೆ ಅನುಸರಿಸಲಿದೆ ಎಂಬ ಸೂಚನೆ ನೀಡಿದ್ದು, “ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳೂ ಜೈಷೆ ಮೊಹಮ್ಮದ್ ಸಂಘಟನೆ ಮತ್ತು ಪಾಕ್ ಗಡಿಯಲ್ಲಿನ ಉಗ್ರ ತರಬೇತಿ ಶಿಬಿರಗಳ ಬಗ್ಗೆ ಅರಿತಿವೆ. ಆತ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನೂ ಬಲ್ಲವು.  ಹೀಗಾಗಿಯೇ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ಭಾರತ ಮನವಿ ಮಾಡಿದೆ. ಈಗಾಗಲೇ ಭದ್ರತಾ ಮಂಡಳಿಯ 15 ಸದಸ್ಯ ರಾ಼ಷ್ಟ್ರಗಳು ಪುಲ್ವಮಾ ದಾಳಿಯನ್ನು ಖಂಡಿಸಿವೆ” ಎಂದಿದ್ದಾರೆ. 
ಪಾಕಿಸ್ತಾನದ ಭೇಟಿಯ ವೇಳೆ ಮಸೂದ್ ಅಜರ್‌ ವಿಷಯ ಪ್ರಸ್ತಾಪವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಲು ಕುಂಗ್, “ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ಸಾಕಷ್ಟು ಅನುಭವಿಸಿವೆ.  ಆದರೆ ಶಾಂತಿ, ಸೌಹಾರ್ದತೆ ಸ್ಥಾಪನೆ ಉಭಯ ರಾಷ್ಟ್ರಗಳಿಗೂ ಇಷ್ಟವಿಲ್ಲವೇನೋ ಎಂದು ಚೀನಾ ಭಾವಿಸುತ್ತಿದೆ.  ಎರಡೂ ದೇಶಗಳ ನಡುವಿನ ಶಾಂತಿಗೆ ಚೀನಾ ಸಾಕಷ್ಟು ಶ್ರಮಿಸಿದೆ” ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯ ಬಳಿಕ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಚೀನಾ ವಿದೇಶಾಂಗ ಸಚಿವರ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದಿದ್ದಾರೆ. 
ಪಾಕಿಸ್ತಾನ ಉಗ್ರರನ್ನು ಬಿತ್ತಿ ಬೆಳೆಯುತ್ತಿರುವ ನೆಲ ಎಂದು ಚೀನಾ ನುಡಿಗಟ್ಟಿನ ಮೂಲಕ ಪಾಕ್ ಭಯೋತ್ಪಾದನಾ ರಾಷ್ಟ್ರ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com