ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಿಂದ 'ರಫೇಲ್'ಗೆ ಆಯುಧ ಪೂಜೆ!
ನವದೆಹಲಿ: ಆಯುಧ ಪೂಜೆಯ ದಿನವಾದ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ಯಾರಿಸ್ ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ನೆರವೇರಿಸಲಿದ್ದಾರೆ. ಆ ಮೂಲಕ ಮೊಟ್ಟ ಮೊದಲ ರಫೆಲ್ ಯುದ್ಧ ವಿಮಾನವನ್ನು ರಾಜನಾಥ್ ಸಿಂಗ್ ಭಾರತಕ್ಕೆ ಹಸ್ತಾಂತರಿಸಿಕೊಳ್ಳಲ್ಲಿದ್ದಾರೆ.
ಹೌದು.. ಫ್ರಾನ್ಸ್ ನ ಬಂದರು ನಗರಿ ಬೋರ್ಡೆಕ್ಸ್ ನಲ್ಲಿ ತಯಾರಾಗುತ್ತಿರುವ 36 ರಫೇಲ್ ಜೆಟ್ ಯುದ್ಧ ವಿಮಾನಗಳ ಪೈಕಿ ಮೊದಲನೆಯ ಯುದ್ಧ ವಿಮಾನ ನಾಳೆ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರವಾಗಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ರಫೆಲ್ ಯುದ್ಧ ವಿಮಾನವನ್ನು ಹಸ್ತಾಂತರಿಸಿಕೊಳ್ಳಲ್ಲಿದ್ದಾರೆ.
ಹಸ್ತಾಂತರದ ಬಳಿಕ, ರಾಜನಾಥ್ ಸಿಂಗ್ ವಿಜಯದಶಮಿಯ ಶುಭ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಪೂಜೆ ನೆರವೇರಿಸಲಿದ್ದಾರೆ. ಬಳಿಕ ರಫೇಲ್ ಯುದ್ಧ ವಿಮಾನದಲ್ಲಿ ಪ್ಯಾರಿಸ್ ವಾಯುನೆಲೆಯಿಂದ ಮೊದಲ ಹಾರಾಟದ ಅನುಭವ ಪಡೆಯಲು ಪ್ರಯಾಣ ಬೆಳೆಸಲಿದ್ದಾರೆ.
ಸೋಮವಾರದಿಂದ ಎರಡು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿರುವ ರಾಜನಾಥ್ ಸಿಂಗ್, ದಸರಾ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವನ್ನೂ ಆಚರಿಸಲಿದ್ದಾರೆ. ಇದೇ, ವೇಳೆ ರಾಜನಾಥ್ ಸಿಂಗ್ ಅವರು, ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿ ಅವರೊಂದಿಗೆ ವಾರ್ಷಿಕ ರಕ್ಷಣಾ ಸಂವಾದವನ್ನು ನಡೆಸಲಿದ್ದಾರೆ, ಇದಕ್ಕೂ ಮೊದಲು ರಾಜನಾಥ್ ಸಿಂಗ್, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಭಾರತ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದ್ದು, ಇವುಗಳಲ್ಲಿ ಒಂದನ್ನು ಮಾತ್ರ ನಾಳೆ ಭಾರತಕ್ಕೆ ರಷ್ಯಾ ಹಸ್ತಾಂತರಿಸಲಿದೆ. ಆದರೆ, ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಿನಲ್ಲಿ ಭಾರತಕ್ಕೆ ಬರಲಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ