'ಪಾಕ್ ಪ್ರಾಯೋಜಿತ ಉಗ್ರ ಕೃತ್ಯಗಳನ್ನು ಕಾಶ್ಮೀರದ ತಲೆಗೆ ಕಟ್ಟುವುದು ಸರಿಯಲ್ಲ'
ಬೆಲ್ಗ್ರೇಡ್: ಕಾಶ್ಮೀರ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಮತ್ತೆ ತೀವ್ರ ಮುಜುಗರಕ್ಕೀಡಾಗಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಜಾಗತಿಕ ವೇದಿಕೆಯಲ್ಲೇ ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ.
ಹೌದು.. ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಪಾಲ್ಗೊಂಡು ಭಾರತದ ಸಂಸತ್ತಿನ ನಿಯೋಗದ ಪರವಾಗಿ ಮಾತನಾಡಿದ ಶಶಿ ತರೂರ್, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹೇಳುತ್ತಿರುವ ಸುಳ್ಳನ್ನು ಜಗಜ್ಜಾಹಿರು ಮಾಡಿದ್ದಾರೆ. ಸಭೆಯಲ್ಲಿ ಅವರು ಮಾತನಾಡಿರುವ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಶಶಿ ತರೂರ್, ವಿಡಿಯೋದಲ್ಲಿ 'ಪಾಕಿಸ್ತಾನ ಪ್ರಾಯೋಜಿತ ಉಗ್ರ ಕೃತ್ಯಗಳನ್ನು ಕಾಶ್ಮೀರದ ತಲೆಗೆ ಕಟ್ಟುವುದು ಸರಿಯಲ್ಲ ಎಂದು ಖಾರವಾಗಿಯೇ ಹೇಳಿದ್ದಾರೆ.
'ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರ ಕುಕೃತ್ಯಕ್ಕೆ ನೆರೆಯ ದೇಶವೇ ನೇರ ಹೊಣೆ. ಅಲ್ಲದೇ ದ್ವೇಷದ ಮೂಲಕ ಅದು ಭಾರತದ ಆಂತರಿಕ ವಿಚಾರಕ್ಕೆ ಹಸ್ತಕ್ಷೇಪಕ್ಕೆ ಯತ್ನಿಸುತ್ತಿದೆ. ಆದರೆ ಅದು ಈ ವಿಚಾರದಲ್ಲಿ ಯಶಸ್ಸು ಕಾಣುವುದಿಲ್ಲ. ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗವಾಗಿದ್ದು, ಜಾಗತಿಕ ವೇದಿಕೆಯನ್ನ ಇಂತಹ ಸುಳ್ಳು ಹಾಗೂ ರಾಜಕೀಯ ಲಾಭಕ್ಕೆ ದುರುಪಯೋಗಪಡಿಸೋದು ಸರಿಯಲ್ಲ. ಭಾರತದ ನಿಯೋಗ ಪಾಕಿಸ್ತಾನದ ಉಲ್ಲೇಖವನ್ನ ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ಆರ್ಟಿಕಲ್ 370 ರದ್ದತಿಗೆ ಭಾರತದ ವಿಪಕ್ಷಗಳ ವಿರೋಧ ಇತ್ತು ಎಂದು ಪಾಕಿಸ್ತಾನ ತನ್ನದೇ ದಾಟಿಯಲ್ಲಿ ವಿವರಣೆ ನೀಡಿದಕ್ಕೆ ತಕ್ಕ ಉತ್ತರ ನೀಡಿದ ತರೂರ್, 'ನಾನು ಭಾರತದ ಅತೀ ದೊಡ್ಡ ಪಕ್ಷದ ಸಂಸದ. ನಮ್ಮ ಹೋರಾಟವನ್ನ ಪ್ರಜಾಪ್ರಭುತ್ವದ ನಿಯಮದಂತೆ ಸಂಸತ್ತಿನಲ್ಲಿ ನಡೆಸುತ್ತೆವೆ. ನಮ್ಮ ಸರ್ಕಾರದೊಂದಿಗೆ ನಾವು ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ಚರ್ಚೆ ನಡೆಸುತ್ತೇವೆ. ಅದಕ್ಕೆ ಗಡಿಯ ಹೊರಗಿನ ದೇಶದ ಬೆಂಬಲದ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.
ಅಲ್ಲದೇ ನೆರೆಯ ರಾಷ್ಟ್ರ ಕಣಿವೆ ರಾಜ್ಯದಲ್ಲಿ ನಡೆಸುವ ಉಗ್ರ ಕೃತ್ಯವನ್ನ ಜಮ್ಮು-ಕಾಶ್ಮೀರದ ತಲೆಗೆ ಕಟ್ಟಲು ಯತ್ನಿಸುತ್ತಿದೆ. ಆದರೆ ನಿಜಕ್ಕೂ ಕಾಶ್ಮೀರಿ ಪ್ರಜೆಗಳು ಅಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಂತಹ ದುರುದ್ದೇಶ ಯತ್ನಕ್ಕೆ ಭಾರತ ಸರ್ಕಾರ ಖಂಡಿತ ಬಿಡುವುದಿಲ್ಲ ಎಂದು ಹೇಳಿದ್ದಾರೆ.
Advertisement