ಎನ್ ಆರ್ ಸಿ, ಅಕ್ರಮ ವಲಸಿಗರ ವಾಪಸ್ ಬಗ್ಗೆ ಬಾಂಗ್ಲ ಸಚಿವ ಹೇಳಿದ್ದಿಷ್ಟು...
ಢಾಕಾ: ಎನ್ ಆರ್ ಸಿ ಪಟ್ಟಿ ಅಂತಿಮಗೊಂಡು 19 ಲಕ್ಷ ಜನರ ಹೆಸರು ಕೈಬಿಟ್ಟಿದ್ದು ಬಾಂಗ್ಲಾ ಗೃಹ ಸಚಿವ ಅಸಾದುಝ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು 1971 ರ ನಂತರ ಭಾರತಕ್ಕೆ ಯಾರೂ ಹೋಗಿಲ್ಲ ಎಂದು ಹೇಳಿದ್ದಾರೆ.
ಎನ್ ಆರ್ ಸಿ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆಯೇ ಅಸ್ಸಾಂ ನ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮ ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವಂತೆ ನೆರೆ ರಾಷ್ಟ್ರ ಬಾಂಗ್ಲಾವನ್ನು ಕೇಳಲಾಗುವುದು ಎಂದು ಹೇಳಿದ್ದರು. ಈ ಬೆನ್ನಲ್ಲೇ ಬಾಂಗ್ಲಾ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮಾಹಿತಿಯ ಪ್ರಕಾರ 1971 ರ ನಂತರ ಬಾಂಗ್ಲಾದಿಂದ ಯಾರೂ ಭಾರತಕ್ಕೆ ಬಂದಿಲ್ಲ ಎಂದು ಖಾನ್ ಹೇಳಿರುವುದನ್ನು ನ್ಯೂಸ್ 18 ವರದಿ ಮಾಡಿದೆ. ಎನ್ ಆರ್ ಸಿ ಭಾರತದ ಆಂತರಿಕ ವಿಷಯ ನಮಗೂ ಅದಕ್ಕೂ ಸಂಬಂಧವಿಲ್ಲ.
ಇದಕ್ಕೂ ಮುನ್ನ ಮಾತನಾಡಿದ್ದ ಅಸ್ಸಾಂ ನ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮ, ಬಾಂಗ್ಲಾ ದೇಶ ಭಾರತದ ಮಿತ್ರ ರಾಷ್ಟ್ರ, ನಮಗೆ ಸಹಕಾರ ನೀಡುತ್ತಿದ್ದಾರೆ. ಅಕ್ರಮ ವಲಸಿಗರ ಪ್ರಕರಣಗಳನ್ನು ಮುಂದಿಟ್ಟಾಗ ಬಾಂಗ್ಲಾ ಅವರ ಜನರನ್ನು ವಾಪಸ್ ಕರೆದುಕೊಂಡಿದೆ, ಸಂಖ್ಯೆ ದೊಡ್ಡದಿದೆ, ಈಗ ಅವರನ್ನು ಗುರುತಿಸುವ ಪ್ರಕ್ರಿಯೆ ನಡೆಯಬೇಕೆಂದು ಹೇಳಿದ್ದರು.
ಶರ್ಮ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಖಾನ್, ಎನ್ ಆರ್ ಸಿ ಗೂ ಬಾಂಗ್ಲಾ ದೇಶಕ್ಕೂ ಸಂಬಂಧವಿಲ್ಲ, ಅದು ಭಾರತದ ಆಂತರಿಕ ವಿಷಯ, ಭಾರತ ನಮಗೆ ಅಧಿಕೃತವಾಗಿ ಮಾಹಿತಿ ನೀಡಲಿ, ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ, 1971 ರ ನಂತರ ಬಾಂಗ್ಲಾದಿಂದ ಭಾರತಕ್ಕೆ ಯಾರೂ ಹೋಗಿಲ್ಲ ಎಂಬುದನ್ನಷ್ಟೇ ಸದ್ಯಕ್ಕೆ ಹೇಳಲು ಸಾಧ್ಯ ಎಂದು ಖಾನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ