ಇಸ್ಲಾಮಾಬಾದ್: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ವಾಯತ್ತತೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಭಾರತವು ಬೆಂಕಿಯೊಂದಿಗೆ ಸರಸವಾಡುತ್ತಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಗುಡುಗಿದ್ದಾರೆ.
ಕೆನಡಾದ-ಅಮೇರಿಕನ್ ಮಾಧ್ಯಮ ಸಂಸ್ಥೆಯಾದ ವೈಸ್ ನ್ಯೂಸ್ಗೆ ಶನಿವಾರ ನೀಡಿದ ಸಂದರ್ಶನದಲ್ಲಿ, ಈ ವಿಷಯ ತಿಳಿಸಿದ ಅವರು, ಭಾರತ ಸರ್ಕಾರವು ತನ್ನ ಸಂವಿಧಾನದ 370 ಮತ್ತು 35-ಎ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದುಪಡಿಸುವ ಮೂಲಕ ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸಬಹುದೆಂದು ಭಾವಿಸಿದರೆ ಅದು ಮೂರ್ಖತನ ಎಂದಿದ್ದಾರೆ.
ಭಾರತವು ವಾಸ್ತವವಾಗಿ ಕಾಶ್ಮೀರದಲ್ಲಿ ಸಾಂವಿಧಾನಿಕ ಬದಲಾವಣೆ ಮೂಲಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿದೆ. ಇದಕ್ಕಾಗಿ ಪಾಕಿಸ್ತಾನ ದೂಷಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು.
ಕಾಶ್ಮೀರ ವಿಚಾರದಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿದೆ ಮತ್ತು ವಿವಾದ ಬಗೆಹರಿಸಿಕೊಳ್ಳಲು ಭಾರತ, ಪಾಕಿಸ್ತಾನದೊಂದಿಗೆ ಮಾತುಕತೆಗೆ ನಿರಾಕರಿಸಿದೆ ಎಂದು ಪಾಕ್ ಅಧ್ಯಕ್ಷ ಆರೋಪಿಸಿದ್ದಾರೆ.
Advertisement