ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ ಬಳಿ ಇರುವ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ ಬೆನ್ನಲ್ಲೇ, ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ಪಾಕಿಸ್ತಾನ ವಿವಿಧ ನಾಟಕಗಳನ್ನು ಆಡಲು ಶುರು ಮಾಡಿದೆ.
ದಾಳಿಯಾದ ಸ್ಥಳಗಳಿಗೆ ವಿದೇಶಿ ಪ್ರತಿನಿಧಿಗಳನ್ನು ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದ ಪಾಕಿಸ್ತಾನ, ಇದೀಗ ಸ್ವತಃ ತಾನೇ ವಿದೇಶಿ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ದಾಳಿಯೇ ನಡೆದಿಲ್ಲ ಎಂದು ಬಿಂಬಿಸಲು ಹೊರಟಿದೆ.
ತಾನು ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ನೀಲಂ ಕಣಿವೆಯ ನೌಶೇರಿ, ಸಹಾಕೋರ್ಟ ಮತ್ತು ಜೂರಾ ವಲಯಕ್ಕೆ ನಿನ್ನೆ ವಿದೇಶಿ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್ ಫೈಸರ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಭಾರತೀಯ ಯೋಧರ ದಾಳಿಯಿಂದ ಭಾರೀ ಹಾನಿಗೀಡಾದ ನೌಸದಾ ಗ್ರಾಮಕ್ಕೂ ವಿದೇಶಿ ಪ್ರತಿನಿಧಿಗಳು ಭೇಟಿ ನೀಡಿದ್ದಾರೆ.
ಭಾರತೀಯ ಸೇನೆ ಉಗ್ರ ನೆಲೆಗಳು ಎಂದು ಆರೋಪಿಸಿದ ಸ್ಥಳೀಯರ ಮನೆಗಳಿಗೆ ಭೇಟಿ ನೀಡಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆಯ ಬಗ್ಗೆ ಪರಿಶೀಲನೆ ನಡೆಸಲು ಭೇಟಿ ನೀಡಲಾಗಿದೆ. ಭೇಟಿಯಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ಭಾಗಿಯಾಗಿಲ್ಲ. ಭಾರತ ಸೇನೆಯ ಹೇಳಿಕೆಯಾಗಿಯೇ ಉಳಿದಿದೆ ಎಂದು ಹೇಳಿದ್ದಾರೆ.
Advertisement