ಪ್ರವಾಸಕ್ಕೆ ತೆರಳಿದ್ದ 8 ಮಂದಿ ಭಾರತೀಯರ ಸಾವು: ಎವರೆಸ್ಟ್ ಪನೋರಮಾ ರೆಸಾರ್ಟ್ ಬಂದ್ ಮಾಡಿದ ನೇಪಾಳ
ಕಠ್ಮಂಡು: ಪ್ರವಾಸಕ್ಕೆ ತೆರಳಿದ್ದ 8 ಭಾರತೀಯರು ಉಸಿರುಗಟ್ಟಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಎವರೆಸ್ಟ್ ಪನೋರಮಾ ರೆಸಾರ್ಟ್'ನ್ನು ನೇಪಾಳ ಸರ್ಕಾರ ಬಂದ್ ಗೊಳಿಸಿ, ರೆಸಾರ್ಟ್ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಕಳಪೆ ಭದ್ರತಾ ವ್ಯವಸ್ಥೆ, ಕಳಪೆ ನಿರ್ವಹಣೆಯಿಂದಾಗಿ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 8 ಮಂದಿ ರೆಸಾರ್ಟ್ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಘಟನೆ ನಡೆದ ಮೂರು ತಿಂಗಳ ಬಳಿಕ ನೇಪಾಳ ಸರ್ಕಾರ ರೆಸಾರ್ಟ್'ನ್ನು ಬಂದ್ ಮಾಡಿಸಿದೆ.
ರೆಸಾರ್ಟ್ ನಲ್ಲಿ ತಂಗಿದ್ದ 15 ಮಂದಿ ಪ್ರವಾಸಿಗರ ಪೈಕಿ 8 ಮಂದಿ ಕೇರಳ ರಾಜ್ಯ ಮೂಲದವರು ಸಾವನ್ನಪ್ಪಿದ್ದರು. ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಭಾರತೀಯರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿತ್ತು.
ಘಟನೆ ಬಳಿಕ ಪ್ರವಾಸಿಗರನ್ನು ವಿಮಾನದ ಮೂಲಕ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಆದರೆ, ಅಷ್ಟರಲ್ಲಾಗಲೇ 8 ಮಂದಿ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದರು.
ಘಟನೆ ನಡೆದ ಮೂರು ತಿಂಗಳ ಬಳಿಕ ಸಮಿತಿ ನೇಪಾಳ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿ ಪರಿಶೀಲಿಸುವ ನೇಪಾಳ ರಾಜ್ಯ ಪ್ರವಾಸೋದ್ಯಮ ಇಲಾಖೆ, ದಮನ್ ಮೂಲದ ಎವರೆಸ್ಟ್ ಪನೋರಮಾ ರೆಸಾರ್ಟ್'ನ್ನು ಬಂದ್ ಮಾಡಿಸಿದೆ. ಅಲ್ಲದೆ, ಪರವಾನಗಿಯನ್ನೂ ರದ್ದುಗೊಳಿಸಿದೆ.
ತನಿಖಾ ವರದಿಯಲ್ಲಿ ರೆಸಾರ್ಟ್ ನಿಯಮಗಳ ಅನುಸಾರ ಅಗತ್ಯ ಭದ್ರತಾ ಕ್ರಮಗಳು ಹಾಗೂ ಪ್ರವಾಸಿಗರಿಗೆ ಅಗತ್ಯ ಸೇವೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


