ದುಬೈ: ಕೊರೋನಾ ವೈರಸ್ ಗೆ ಭಾರತೀಯ ಮೂಲದ ವೈದ್ಯ ಬಲಿ
ದುಬೈ: 61 ವರ್ಷದ ಭಾರತೀಯ ಮೂಲದ ವೈದ್ಯ ದುಬೈನಲ್ಲಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ನಾಗಪುರ ಮೂಲದ ಡಾ.ಸುಧೀರ್ ರಂಬೌ ವಾಶ್ಮೀಕರ್ ಮೃತ ವೈದ್ಯ, ಶನಿವಾರ ಆಲ್ ಐನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ವಿಪಿಎಸ್ ನೆಟ್ ವರ್ಕ್ ನ ಆಲ್ ಐನ್ ನ ಬುರ್ಜೀ ರಾಯಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ಈ ಆಸ್ಪತ್ರೆಯಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ವೈದ್ಯರಾಗಿದ್ದರು.
ಮೇ 9 ರಂದು ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು, ಅದಾದ 2 ದಿನಗಳ ನಂತರ ಮೇ11 ರಂದು ಆಲ್ ಐನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಜೂನ್ 6 ರಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭಾನುವಾರ ವೈದ್ಯರ ಅಂತ್ಯಕ್ರಿಯೆ ನೆರವೇರಿಸಲಾಗಿದೆ, ತುಂಬಾ ಸಂತೋಷವಾಗಿ ಎಲ್ಲರ ಜೊತೆ ಬೆರೆಯುತ್ತಿದ್ದ ಅವರು ಪ್ರಾಮಾಣಿಕ ಹಾಗೂ ನಿಷ್ಠ ವೈದ್ಯರಾಗಿದ್ದರು ಎಂದು ಅವರ ಸಹೋದ್ಯೋಗಿಗಳು ಆಘಾತ ವ್ಯಕ್ತ ಪಡಿಸಿದ್ದಾರೆ.
2018 ರಲ್ಲಿ ವಾಶ್ಮೀಕರ್ ವಿಪಿಎಸ್ ಆಸ್ಪತ್ರೆ ಸೇರಿದ್ದರು. ತುಂಬಾ ಅನುಭವವುಳ್ಳ ಅವರು ಪ್ರತಿಭಾನ್ವಿತ ವೈದ್ಯರಾಗಿದ್ದರು. ಸದಾ ಮುಖದಲ್ಲಿ ನಗು ತುಂಬಿಕೊಳ್ಳುತ್ತಿದ್ದ ಅವರು ರೋಗಿಗಳ ಜೊತೆ ಹಸನ್ಮುಖರಾಗಿಯೇ ಮಾತನಾಡುತ್ತಿದ್ದರು. ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ