ಜಿನಿವಾ: ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರದ ಬಗ್ಗೆ ಮೂಗು ತೂರಿಸುತ್ತಿರುವ ಪಾಕಿಸ್ತಾನ, ಒಐಸಿ, ಟರ್ಕಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಒಟ್ಟಿಗೆ ಝಾಡಿಸಿದೆ.
ಮಂಗಳವಾರ ವಿಶ್ವಸಂಸ್ಥೆಯಲ್ಲಿ ನಡೆದ ಮಾನವ ಹಕ್ಕುಗಳ ಪರಿಷತ್ ನ 46 ನೇ ಸೆಷನ್ ನಲ್ಲಿ ಮಾತನಾಡಿರುವ ಭಾರತದ ಖಾಯಂ ಮಿಷನ್ ನ ಫಸ್ಟ್ ಸೆಕರೇಟರಿ ಪವನ್ ಬಧೆ, ಟರ್ಕಿ, ಪಾಕಿಸ್ತಾನ ಹಾಗೂ ಒಐಸಿಗಳನ್ನು ಒಟ್ಟಿಗೆ ತರಾಟೆಗೆ ತೆಗೆದುಕೊಂಡಿದ್ದು, ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೂ ಮುನ್ನ ಪ್ರಜಾಪ್ರಭುತ್ವದ ಆಚರಣೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವಂತೆ ಹೇಳಿ ಝಾಡಿಸಿದ್ದಾರೆ.
ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರದ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯ ಉಲ್ಲೇಖವನ್ನು ನಾವು ತರಸ್ಕರಿಸುತ್ತೇವೆ. ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಮಾತನಾಡುವುದಕ್ಕೆ ಒಐಸಿಗೆ ಮಾನ್ಯತೆ ಇಲ್ಲ. ತನ್ನನ್ನು ದುರ್ಬಳಕೆ ಮಾಡಿಕೊಂಡು ಪೂರ್ಣ ಬದಲಾವಣೆ ಮಾಡುವುದಕ್ಕೆ ಒಐಸಿ ಪಾಕಿಸ್ತಾನಕ್ಕೆ ಅವಕಾಶ ನೀಡಿದೆ. ತಮ್ಮ ಹಿತಾಸಕ್ತಿಯ ದೃಷ್ಟಿಯಲ್ಲಿ ಪಾಕಿಸ್ತಾನಕ್ಕೆ ಇಂತಹ ಅವಕಾಶ ನೀಡುವುದರ ಬಗ್ಗೆ ಒಐಸಿಯೇ ನಿರ್ಧರಿಸಬೇಕು ಎಂದು ಭಾರತ ಹೇಳಿದೆ.
ಸುಳ್ಳು ಆರೋಪಗಳು ಹಾಗೂ ಕಟ್ಟುಕಥೆಗಳಿಂದ ನನ್ನ ದೇಶಕ್ಕೆ ಅಪಖ್ಯಾತಿ ತರುವುದು ಪಾಕಿಸ್ತಾನದ ಅಭ್ಯಾಸವಾಗಿಬಿಟ್ಟಿದೆ.
ವಿಶ್ವಸಂಸ್ಥೆಯಿಂದ ನಿರ್ಬಂಧ ಎದುರಿಸುತ್ತಿರುವವರಿಗೆ ಪಿಂಚಣಿ ನೀಡುವ, ಭಯೋತ್ಪಾದನೆಯ ಕೂಪವಾಗಿದ್ದುಕೊಂಡು ಧಾರ್ಮಿಕ, ಜನಾಂಗೀಯ ಅಲ್ಪಸಂಖ್ಯಾತರನ್ನು ನಿರಂತರವಾಗಿ ಕಿರುಕುಳ ನೀಡುತ್ತಿರುವ ರಾಷ್ಟ್ರದಿಂದ ಮಾನವ ಹಕ್ಕುಗಳ ಬಗ್ಗೆ ಅನಪೇಕ್ಷಿತ ಭಾಷಣ, ಉಪನ್ಯಾಸಗಳು ಭಾರತ ಅಥವಾ ಇನ್ನಾವುದೇ ದೇಶಕ್ಕೂ ಅಗತ್ಯವಿಲ್ಲ ಎಂದು ಭಾರತ ತೀಕ್ಷ್ಣವಾಗಿ ಪಾಕ್ ಹಾಗೂ ಇಸ್ಲಾಮಿಕ್ ಸಹಕಾರ ಒಕ್ಕೂಟ, ಟರ್ಕಿಗೆ ಎಚ್ಚರಿಕೆ ನೀಡಿದೆ.
Advertisement