ಇಸ್ಲಾಮಾಬಾದ್: ಯುವತಿಯನ್ನು ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ ಎಂದು ಯುವಕನನ್ನು ಸಿಖ್ ಕುಟುಂಬ ಥಳಿಸಿದೆ ಎಂದು ಆರೋಪಿಸಿ ಪಾಕಿಸ್ತಾನದ ಮುಸ್ಲಿಮರು ಗುರುದ್ವಾರದ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ನಲ್ಲಿರುವ ನನಕಾನಾ ಗುರುದ್ವಾರದ ಸುತ್ತ ನೆರೆದಿರುವ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು, ಗುರುದ್ವಾರವನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ್ದಾರೆ. ಸ್ಥಳೀಯ ನೂರಾರು ಮುಸ್ಲಿಮರು ಶುಕ್ರವಾರ ಸಂಜೆ ನನಕಾನಾ ಗುರುದ್ವಾರ ಸುತ್ತವರೆದಿದ್ದು, ಗುರುದ್ವಾರದ ಮೇಲೆ ಕಲ್ಲು ತೂರಿದ್ದಾರೆ.
ಮೂಲಗಳ ಪ್ರಕಾರ ಮಹಮ್ಮದ್ ಹಸ್ಸನ್ ಎಂಬಾತನ ಸೋದರ ಗುರುದ್ವಾರದ ಮುಖ್ಯಸ್ಥನ ಮಗಳಾದ ಜಗ್ಜಿತ್ ಕೌರ್ ಎಂಬಾಕೆಯನ್ನು ಅಪಹರಿಸಿ ಮತಾಂತರ ಮಾಡಿದ್ದಾನೆ. ಇದೇ ಕಾರಣಕ್ಕೆ ಗುರುದ್ವಾರದ ಮುಖ್ಯಸ್ಥರ ಕುಟುಂಬ ಮಹಮ್ಮದ್ ಹಸ್ಸನ್ ಸಹೋದರನ ಮೇಲೆ ಹಲ್ಲೆ ಮಾಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿನ ಮುಸ್ಲಿಮರು ಏಕಾಏಕಿ ಗುಂಪುಸೇರಿ ಗುರುದ್ವಾರದ ಮೇಲೆ ದಾಳಿ ಮಾಡಿದ್ದಾರೆ. ಉದ್ರಿಕ್ತರು ಇಲ್ಲಿ ಗುರುದ್ವಾರ ಇರಲು ಬಿಡುವುದಿಲ್ಲ. ಇದನ್ನು ಧ್ವಂಸ ಮಾಡಬೇಕು ಎಂದು ಕೂಗುತ್ತಿದ್ದಾರೆ. ಅಲ್ಲದೆ ಈ ಸ್ಥಳದ ನನಕಾನಾ ಸಾಹಿಬ್ ಎಂಬ ಹೆಸರನ್ನು ತೆಗೆದು ಅದಕ್ಕೆ ಗುಲಾಮ್ ಎ ಮುಸ್ತಾಫ್ ಎಂದು ಹೆಸರಿಡುತ್ತೇವೆ. ನನಕಾನಾದಲ್ಲಿನ್ನು ಸಿಖ್ಖರು ಇರುವಂತಿಲ್ಲ” ಎಂಬ ಘೋಷಣೆ ಕೂಗುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಮಹಮ್ಮದ್ ಹಸ್ಸನ್, ಸಿಖ್ಖರ ಹುಡುಗಿಯನ್ನು ಅಪಹರಿಸಿ, ಹುಡುಗಿಯನ್ನು ಮತಾಂತರ ಮಾಡಿ, ಮದುವೆಯಾಗಿದ್ದಕ್ಕೆ ನನ್ನ ಸೋದರನಿಗೆ ಥಳಿಸಲಾಗಿದೆ. ಕುಟುಂಬದ ಪ್ರಕಾರ ಮತಾಂತರಗೊಂಡ ಆ ಸಿಖ್ ಹುಡುಗಿಗೆ ಈಗ ಆಯೇಷಾ ಎಂದು ಹೆಸರಿಡಲಾಗಿದೆ. ಆಕೆ ಮತ್ತೆ ಮತಾಂತರವಾಗಲು ನಿರಾಕರಿಸಿದ್ದಾಳೆ ಎಂದು ಹೇಳಿದ್ದಾನೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಗುಂಪಿನ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರವಷ್ಟೇ ಇಲ್ಲಿ ಗುರು ಗೋವಿಂದ್ ಸಿಂಗ್ ಜಯಂತಿಯನ್ನು ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುದ್ವಾರದಲ್ಲಿ ಶುಕ್ರವಾರವೂ ಜನ ಜಂಗುಳಿ ಇತ್ತು. ಕಲ್ಲು ತೂರಾಟ ಸಮಯದಲ್ಲಿ ಒಳಗಿದ್ದ ಭಕ್ತರು ಆತಂಕಕ್ಕೆ ಈಡಾಗಿದ್ದರು.
Advertisement