ತಾಲಿಬಾನ್ ಗೆ ಪಾಕಿಸ್ತಾನ ಬೆಂಬಲ; ಭಾರತ ನಮ್ಮ ನಿಜವಾದ ಮಿತ್ರ: ಆಫ್ಘನ್ ಪಾಪ್ ಗಾಯಕಿ

ತಾಲಿಬಾನ್ ಪಡೆಗಳು ಅಫ್ಗಾನಿಸ್ತಾನದಲ್ಲಿ ಬೆಳೆಯಲು ಮತ್ತು ನಮ್ಮ ದೇಶವನ್ನು ವಶಕ್ಕೆ ಪಡೆಯಲು ಪಾಕಿಸ್ತಾನವೇ ನೇರ ಕಾರಣ ಎಂದು ಆ ದೇಶದಿಂದ ಪಲಾಯನ ಮಾಡಿರುವ ಖ್ಯಾತ ಪಾಪ್‌ ತಾರೆ ಆರ್ಯಾನಾ ಸಯೀದ್‌ ಹೇಳಿದ್ದಾರೆ.
ಅಫ್ಗಾನ್ ಪಾಪ್ ಗಾಯಕಿ ಅರ್ಯಾನಾ ಸಯೀದ್
ಅಫ್ಗಾನ್ ಪಾಪ್ ಗಾಯಕಿ ಅರ್ಯಾನಾ ಸಯೀದ್

ನವದೆಹಲಿ:‌ ತಾಲಿಬಾನ್ ಪಡೆಗಳು ಅಫ್ಗಾನಿಸ್ತಾನದಲ್ಲಿ ಬೆಳೆಯಲು ಮತ್ತು ನಮ್ಮ ದೇಶವನ್ನು ವಶಕ್ಕೆ ಪಡೆಯಲು ಪಾಕಿಸ್ತಾನವೇ ನೇರ ಕಾರಣ ಎಂದು ಆ ದೇಶದಿಂದ ಪಲಾಯನ ಮಾಡಿರುವ ಖ್ಯಾತ ಪಾಪ್‌ ತಾರೆ ಆರ್ಯಾನಾ ಸಯೀದ್‌ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ಲಭ್ಯವಾಗಿರುವ ವಿಡಿಯೋದಲ್ಲಿ ಅರ್ಯಾನ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದು, ಪ್ರಮುಖವಾಗಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಬೆಳವಣಿಗೆಗೆ ಪಾಕಿಸ್ತಾನವೇ ನೇರ ಕಾರಣ. ಪಾಕಿಸ್ತಾನ ಆರ್ಥಿಕ ಮತ್ತು ಇತರೆ ಮೂಲದ ನೆರವನಿಂದಾಗಿಯೇ ತಾಲಿಬಾನ್ ಬೆಳೆದು ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದೆ ಎಂದು ಆರೋಪಿಸಿದ್ದಾರೆ. 

ಗೋಪ್ಯ ಸ್ಥಳದಲ್ಲಿದ್ದುಕೊಂಡೇ ಮಾಧ್ಯಮದವರೊಂದಿಗೆ ಮಾತನಾಡಿರುವ ಸಯೀದ್‌, 'ತಾಲಿಬಾನ್‌ ಉಗ್ರ ಸಂಘಟನೆಯನ್ನು ಸಶಕ್ತವಾಗಿ ಬೆಳೆಸಿದ್ದು ಪಾಕಿಸ್ತಾನ. ನಾನು ಪಾಕಿಸ್ತಾನವನ್ನು ದೂರುತ್ತೇನೆ. ತಾಲಿಬಾನ್‌ ಸಂಘಟನೆಯು ಸದೃಢಗೊಳ್ಳುತ್ತಿರುವುದರ ಹಿಂದೆ ಪಾಕಿಸ್ತಾನ ಇದೆ ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ವಿಡಿಯೊಗಳನ್ನು ನಾವು ಸಾಕಷ್ಟು ವರ್ಷಗಳಿಂದ ನೋಡುತ್ತೀದ್ದೇವೆ. ನಮ್ಮ ಸರ್ಕಾರವು ಪ್ರತಿ ಸಲ ತಾಲಿಬಾನ್‌ ಜೊತೆ ಮುಖಾಮುಖಿಯಾದಾಗ ಪಾಕಿಸ್ತಾನ ಮತ್ತು ಅದರ ಗುರುತುಗಳು ಸಿಗುತ್ತಿದ್ದವು. ಪಾಕಿಸ್ತಾನದ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ನಾನು ಪಾಕಿಸ್ತಾನವನ್ನು ದೂರುತ್ತೇನೆ ಎಂದು ಹೇಳಿದ್ದಾರೆ.

ಹಾಗೆಯೇ, ತಾಲಿಬಾನ್‌ ಉಗ್ರರಿಗೆ ಪಾಕಿಸ್ತಾನವೇ ತರಬೇತಿ ನೀಡುತ್ತಿದೆ ಎಂದೂ ನೇರ ಆರೋಪ ಮಾಡಿದ ಅವರು, ಉಗ್ರರಿಗೆ ಪಾಕಿಸ್ತಾನ ಸೂಚನೆಗಳನ್ನು ನೀಡುತ್ತಿದೆ.  ಉಗ್ರರು ಪಾಕ್‌ನಲ್ಲಿ ತರಬೇತಿ ಪಡೆಯಲು ತಮ್ಮದೇ ನೆಲೆಗಳನ್ನು ಹೊಂದಿದ್ದಾರೆ. ಪಾಕಿಸ್ತಾನವು ಉಗ್ರರಿಗೆ ನೆರವು ನೀಡದಂತೆ ಮಾಡಲು ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನಕ್ಕೆ ಧನ ಸಹಾಯ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಭಾರತ ನಮ್ಮ ನಿಜವಾದ ಮಿತ್ರ
ಅಲ್ಲದೆ ಅಂತಾರಾಷ್ಟ್ರೀಯ ಸಮುದಾಯವು ಮಾತುಕತೆ ನಡೆಸಿ ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸಲು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ ಅರ್ಯಾನಾ, ಅಫ್ಗಾನಿಸ್ತಾನದ ಬೆಳವಣಿಗೆಗಳ ವಿಚಾರದಲ್ಲಿ ಭಾರತ ಸರ್ಕಾರ ನಡೆಸಿದ ಪ್ರಯತ್ನಗಳು ಶ್ಲಾಘನೀಯ. ಭಾರತ ʼನಿಜವಾದ ಸ್ನೇಹಿತʼ ಎಂದು ಅವರು ಬಣ್ಣಿಸಿದ್ದಾರೆ.

ʼನಮಗಾಗಿ ಭಾರತ ಯಾವಾಗಲೂ ಒಳ್ಳೆಯದನ್ನೇ ಮಾಡಿದೆ. ಭಾರತ ನಿಜವಾದ ಸ್ನೇಹಿತ. ಆ ದೇಶದವರು ನಮ್ಮ ಜನರಿಗೆ, ನಿರಾಶ್ರಿತರಿಗೆ ಅಪಾರ ನೆರವು ನೀಡಿದ್ದಾರೆ ಮತ್ತು ದಯೆ ತೋರಿದ್ದಾರೆ. ಈ ಹಿಂದೆ ಭಾರತದಲ್ಲಿದ್ದ ಅಫ್ಗನ್ನರು ಆ ದೇಶ ಮತ್ತು ಅಲ್ಲಿನ ಜನರ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಆಡಿದ್ದಾರೆ. ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆ. ಅಫ್ಗಾನಿಸ್ತಾನದ ಪರವಾಗಿ ಭಾರತಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ನೆರೆಹೊರೆಯಲ್ಲಿರುವ ಏಕೈಕ ಉತ್ತಮ ಮಿತ್ರ ರಾಷ್ಟ್ರ ಎಂದರೆ ಅದು ಭಾರತ ಮಾತ್ರ ಎಂದು ನಾವು ಇತ್ತೀಚಿನ ವರ್ಷಗಳಲ್ಲಿ ಅರಿತುಕೊಂಡಿದ್ದೇವೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com