ನಟ ದಿಲೀಪ್ ಕುಮಾರ್ ಅವರ ಔದಾರ್ಯ ನೆನೆದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್: ಭಾರತೀಯ ಸಿನಿಮಾದ ದಿಗ್ಗಟ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ. ತನ್ನ ತಾಯಿಯ ನೆನಪಿನಲ್ಲಿ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲು ಟ್ರಸ್ಟ್ ವೊಂದಕ್ಕೆ ನಿಧಿ ಸಂಗ್ರಹಿಸುವಲ್ಲಿ ದಿಲೀಪ್ ಕುಮಾರ್ ಅವರ ಔದಾರ್ಯವನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದಶಕಗಳಿಂದ ಭಾರತೀಯ ಚಿತ್ರರಂಗದ ದಂತಕಥೆಯಂತಿದ್ದ ದಿಲೀಪ್ ಕುಮಾರ್ ಧೀರ್ಘಕಾಲೀನ ಅನಾರೋಗ್ಯದಿಂದ ಮುಂಬೈಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.
ದಿಲೀಪ್ ಕುಮಾರ್ ನಿಧನದ ಸುದ್ದಿ ದು:ಖವನ್ನು ಮೂಡಿಸಿದೆ. ಎಸ್ ಕೆಎಂಟಿಹೆಚ್ ಯೋಜನೆಗಾಗಿ ದೇಣಿಗೆ ಸಂಗ್ರಹಿಸಲು ಸಹಾಯ ಮಾಡಲು ಸಮಯವನ್ನು ನೀಡಿದ್ದ ಅವರ ಔದಾರ್ಯವನ್ನು ಮೆರೆಯಲು ಸಾಧ್ಯವಿಲ್ಲ, ಕಷ್ಟಕಾಲದಲ್ಲಿ ಅವರ ಸಮ್ಮುಖದಲ್ಲಿ ಪಾಕಿಸ್ತಾನ ಮತ್ತು ಲಂಡನ್ ನಲ್ಲಿ ಅಪಾರ ಪ್ರಮಾಣದ ಹಣ ಸಂಗ್ರಹಿಸಲು ನೆರವಾಗಿತ್ತು ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಇದರ ಹೊರತಾಗಿ ದಿಲೀಪ್ ಕುಮಾರ್ ಅತ್ಯುತ್ತಮ ಮತ್ತು ಹಿರಿಯ ನಟ ಎಂದು ಅವರು ಹೇಳಿದ್ದಾರೆ.
ಶೌಕತ್ ಖಾನಂ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳು ಲಾಹೋರ್ ಮತ್ತು ಪೇಶಾವರದಲ್ಲಿರುವ ಅತ್ಯಾಧುನಿಕ ಕ್ಯಾನ್ಸರ್ ಕೇಂದ್ರಗಳಾಗಿವೆ. ಲಾಹೋರ್ ನ ಎಸ್ ಕೆಎಂಸಿಹೆಚ್ ಅಂಡ್ ಆರ್ ಸಿ ಶೌಕತ್ ಖಾನಂ ಸ್ಮಾರಕ ಟ್ರಸ್ಟ್ ನ ಮೊದಲ ಪ್ರಾಜೆಕ್ಟ್ ಆಗಿದೆ. ಇದು ಇಮ್ರಾನ್ ಖಾನ್ ಅವರ ಕೂಸಾಗಿದೆ. 1985 ರಲ್ಲಿ ಅವರ ತಾಯಿ ಶೌಕತ್ ಖಾನಂ ಕ್ಯಾನ್ಸರ್ ಗೆ ಬಲಿಯಾದ ನಂತರ ಆಸ್ಪತ್ರೆಯನ್ನು ನಿರ್ಮಿಸಲು ಸ್ಫೂರ್ತಿ ಸಿಕ್ಕಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ