ಬಾಂಗ್ಲಾದೇಶ ಅಗ್ನಿ ಅವಘಡ
ಬಾಂಗ್ಲಾದೇಶ ಅಗ್ನಿ ಅವಘಡ

ಬಾಂಗ್ಲಾದೇಶದಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 52 ಮಂದಿ ಸಾವು, 30ಕ್ಕೂ ಹೆಚ್ಚು ಮಂದಿ ನಾಪತ್ತೆ

ಬಾಂಗ್ಲಾದೇಶದ ಜ್ಯೂಸ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 52 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರೂಪ್ ಗಂಜ್: ಬಾಂಗ್ಲಾದೇಶದ ಜ್ಯೂಸ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 52 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರಗಿರುವ ನಾರ್ಯಾನ್ ಗಂಜ್ ನ ರುಪ್ಗಂಜ್ ನಲ್ಲಿರುವ ಆರು ಅಂತಸ್ತಿನ ಶೆಜಾನ್ ಜ್ಯೂಸ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಲೇ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿದ್ದು, ಈ ದುರಂತದಲ್ಲಿ  ಕನಿಷ್ಠ 52 ಮಂದಿ ಜನರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇರುವ ಕಾರಣ ಬೆಂಕಿಯು ಕಟ್ಟಡದ ನೆಲಮಹಡಿಯಿಂದ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಇನ್ನು ಭಾರಿ ಪ್ರಮಾಣದ ಅಗ್ನಿ ಜ್ವಾಲೆಗಳಿಂದ ತಪ್ಪಿಸಿಕೊಳ್ಳಲು ಜೀವ ಉಳಿಸಿಕೊಳ್ಳಲು ಹಲವಾರು ಕಾರ್ಮಿಕರು ಕಟ್ಟಡದಿಂದ ಜಿಗಿದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಮೂಲಗಳ ಪ್ರಕಾರ ಹಶೆಮ್ ಫುಡ್ಸ್ ಲಿಮಿಟೆಡ್ ನ ಕಾರ್ಖಾನೆ ಕಟ್ಟಡದಲ್ಲಿ ಸುಮಾರು 100ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು. ಈ ಪೈಕಿ 52 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಈ 52 ಮಂದಿಯ ಪೈಕಿ 44 ಮಂದಿಯ ಗುರುತುಪತ್ತೆಯಾಗಿದೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ 18  ಅಗ್ನಿಶಾಮಕ ಘಟಕಗಳು ಬೆಂಕಿಯನ್ನ ನಂದಿಸಲು ಹರಸಾಹಸಪಡುತ್ತಿವೆ. 

ಬೆಂಕಿಯ ಸಮಯದಲ್ಲಿ ಮುಂಭಾಗದ ಗೇಟ್ ಮತ್ತು ಕಾರ್ಖಾನೆಯ ನಿರ್ಗಮನ ಗೇಟ್‌ ಲಾಕ್ ಆಗಿತ್ತು. ಇದು ಸಾವಿನ ಪ್ರಮಾಣ ಅಧಿಕವಾಗಲು ಪರೋಕ್ಷವಾಗಿ ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಕಟ್ಟಡದಲ್ಲಿ ಸರಿಯಾದ ಅಗ್ನಿ ಸುರಕ್ಷತಾ ಕ್ರಮಗಳಿರಲಿಲ್ಲ. ಬೆಂಕಿಯನ್ನು ಸಂಪೂರ್ಣವಾಗಿ  ನಿಯಂತ್ರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಾರಾಯಣ ಗಂಜ್ ಜಿಲ್ಲಾ ಅಗ್ನಿಶಾಮಕ ಸೇವೆಯ ಉಪ ನಿರ್ದೇಶಕ ಅಬ್ದುಲ್ಲಾ ಅಲ್ ಅರಿಫೈನ್ ಹೇಳಿದ್ದಾರೆ.

ಪೊಲೀಸರು ಆರಂಭದಲ್ಲಿ ಮೂರು ಮೃತದೇಹಗಳನ್ನು ಹೊರತಂದರು. ಆದರೆ ಅಗ್ನಿಶಾಮಕ ದಳದವರು ಮೇಲಿನ ಮಹಡಿಗೆ ತಲುಪಿ ಸಿಕ್ಕಿಬಿದ್ದ ಕಾರ್ಮಿಕರ ಶವಗಳನ್ನು ಹೊರಗೆ ತರಲು ಪ್ರಾರಂಭಿಸಿದಾಗ ಇಡೀ ಘಟನೆಯ ತೀವ್ರತೆ ಅರಿವಾಯಿತು. ಅಲ್ಲಿ ಸುಟ್ಟು ಕರಕಲಾದ ಹತ್ತಾರು ದೇಹಗಳಿದ್ದವು. ಆರು ಅಂತಸ್ತಿನ  ಕಟ್ಟಡದಲ್ಲಿ ಜ್ವಾಲೆ ಬೇಗನೆ ಆವರಿಸಿದ್ದರಿಂದ ಗಾಯಗೊಂಡ 30 ಕ್ಕೂ ಹೆಚ್ಚು ಜನರು ಮೇಲಿನ ಮಹಡಿಯಿಂದ ಹಾರಿದ್ದಾರೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಮೇಲ್ಚಾವಣಿ ಮೂಲಕ 25 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. 

ಈ ಹಿಂದೆ ಫೆಬ್ರವರಿ 2019 ರಲ್ಲಿ ಢಾಕಾ ಅಪಾರ್ಟ್‌ ಮೆಂಟ್‌ಗಳಲ್ಲಿ ಅಕ್ರಮವಾಗಿ ರಾಸಾಯನಿಕಗಳನ್ನು ಅಕ್ರಮವಾಗಿ ಶೇಖರಿಸಿಟ್ಟು ಅಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಕನಿಷ್ಠ 70 ಜನರು ಸಾವನ್ನಪ್ಪಿದ್ದರು.
 

Related Stories

No stories found.

Advertisement

X
Kannada Prabha
www.kannadaprabha.com