'ಇಸ್ಲಾಮಿಕ್ ನಿಯಮ, ಷರಿಯಾ ಕಾನೂನು ಎತ್ತಿಹಿಡಿಯಿರಿ': ಅಫ್ಘನ್ ಸರ್ಕಾರಕ್ಕೆ ತಾಲಿಬಾನ್‌ ಪರಮೋಚ್ಛ ನಾಯಕ ಕರೆ!

ದೇಶದಲ್ಲಿ ಇಸ್ಲಾಮಿಕ್ ನಿಯಮ ಹಾಗೂ ಷರಿಯಾ ಕಾನೂನನ್ನು ಎತ್ತಿಹಿಡಿಯುವಂತೆ ಅಫ್ಘಾನಿಸ್ತಾನ ನೂತನ ಸರ್ಕಾರಕ್ಕೆ ತಾಲಿಬಾನ್‌ನ ಪರಮೋಚ್ಛ ನಾಯಕ ಹಿಬತುಲ್ಲಾ ಅಖುಂಡಜಾದ ಕರೆ ನೀಡಿದ್ದಾನೆ. 
ತಾಲಿಬಾನ್ ಉಗ್ರರು
ತಾಲಿಬಾನ್ ಉಗ್ರರು

ಕಾಬುಲ್: ದೇಶದಲ್ಲಿ ಇಸ್ಲಾಮಿಕ್ ನಿಯಮ ಹಾಗೂ ಷರಿಯಾ ಕಾನೂನನ್ನು ಎತ್ತಿಹಿಡಿಯುವಂತೆ ಅಫ್ಘಾನಿಸ್ತಾನ ನೂತನ ಸರ್ಕಾರಕ್ಕೆ ತಾಲಿಬಾನ್‌ನ ಪರಮೋಚ್ಛ ನಾಯಕ ಹಿಬತುಲ್ಲಾ ಅಖುಂಡಜಾದ ಕರೆ ನೀಡಿದ್ದಾನೆ. 

ಈ ಕುರಿತು ಇದೇ ಮೊದಲ ಬಾರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಹಿಬತುಲ್ಲಾ ಅಖುಂಡಜಾದ, ಭವಿಷ್ಯದ ಅಫ್ಘಾನಿಸ್ತಾನವು ತಾಲಿಬಾನ್ ಆಳ್ವಿಕೆಯಲ್ಲಿ ಹೇಗಿರುತ್ತದೆ ಎಂಬುದುನ್ನು ತಿಳಿಸಿದ್ದಾನೆ. 

ಇಸ್ಲಾಮಿಕ್ ಕಾನೂನಿಗೆ ವಿರುದ್ಧವಲ್ಲದ ಎಲ್ಲಾ ಅಂತರಾಷ್ಟ್ರೀಯ ಕಾನೂನುಗಳು, ಒಪ್ಪಂದಗಳು ಮತ್ತು ನಿರ್ಣಯಗಳಿಗೆ ತಾಲಿಬಾನ್ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

ಶರಿಯಾ ಚೌಕಟ್ಟಿನೊಳಗೆ ಎಲ್ಲಾ ದೇಶವಾಸಿಗಳಿಗೆ ಧಾರ್ಮಿಕ ಮತ್ತು ಆಧುನಿಕ ವಿಜ್ಞಾನಕ್ಕೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ತಾಲಿಬಾನ್ ಒದಗಿಸುತ್ತದೆ. ಅದೇ ಸಮಯದಲ್ಲಿ, ಇಸ್ಲಾಂನ ವ್ಯಾಪ್ತಿಯಲ್ಲಿ ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು ಸೇರಿದಂತೆ ಹಿಂದುಳಿದ ಜನರ ಹಕ್ಕುಗಳನ್ನು ರಕ್ಷಿಸಲು ತಾಲಿಬಾನ್ ಗಂಭೀರ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಭರವಸೆ ನೀಡಲಾಗಿದೆ.

ಇದೇ ವೇಳೆ ತಾಲಿಬಾನ್ ಆಳ್ವಿಕೆಯಲ್ಲಿ ಅಫಘಾನ್ ಮಣ್ಣನ್ನು ಬೇರೆ ಯಾವುದೇ ದೇಶದ ಭದ್ರತೆಗೆ ವಿರುದ್ಧವಾಗಿ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಎಲ್ಲಾ ವಿದೇಶಿ ರಾಜತಾಂತ್ರಿಕರು, ರಾಯಭಾರ ಕಚೇರಿಗಳು, ದೂತಾವಾಸಗಳು, ಮಾನವೀಯ ಸಂಘಟನೆಗಳು ಮತ್ತು ಹೂಡಿಕೆದಾರರಿಗೆ ಅಫ್ಘಾನಿಸ್ತಾನದಲ್ಲಿ ಸುರಕ್ಷಿತ ವಾತಾವರಣವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾನೆ. 

ವೈದ್ಯರು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಂತಹ ಪ್ರತಿಭಾವಂತ ಮತ್ತು ವೃತ್ತಿಪರರಿಗೆ ಸರ್ಕಾರವು ಪ್ರಾಮುಖ್ಯತೆಯನ್ನು ನೀಡುತ್ತದೆ. ದೇಶದ ಅಭಿವೃದ್ಧಿಗೆ ಅವರ ಅಗತ್ಯವಿದೆ ಎಂದು ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡಜಾದ ಹೇಳಿದ್ದು, ದೇಶವನ್ನು ತೊರೆಯದಂತೆ ತಾಲಿಬಾನ್ ಜನರಿಗೆ ಮನವಿ ಮಾಡಿದ್ದಾನೆ. ತಾಲಿಬಾನ್ ಆಳ್ವಿಕೆಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ, ಹಾಗಾಗಿ ಯಾರೂ ಅಫ್ಘಾನಿಸ್ತಾನವನ್ನು ತೊರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾನೆ. 

ತಾಲಿಬಾನ್ ಶಾಂತಿಯುತ, ಸಮೃದ್ಧ ಮತ್ತು ಸ್ವಾವಲಂಬಿ ಅಫ್ಘಾನಿಸ್ತಾನವನ್ನು ಬಯಸುತ್ತದೆ. ಏಕೆಂದರೆ ದೇಶದಲ್ಲಿ ಯುದ್ಧ ಮತ್ತು ಸಂಘರ್ಷದ ಎಲ್ಲಾ ಕಾರಣಗಳನ್ನು ತೊಡೆದುಹಾಕಲು ಈ ಪ್ರಯತ್ನಗಳನ್ನು ಮಾಡಲಾಗುವುದು. ಇದರಿಂದ ದೇಶವಾಸಿಗಳು ಸಂಪೂರ್ಣ ಸುರಕ್ಷತೆ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಹೊಸ ಸರ್ಕಾರವು ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಮತ್ತು ಅದಕ್ಕಾಗಿ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಹೇಳಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com