ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮನ್ನು ಅನರ್ಹಗೊಳಿಸುವ ಮೂಲಕ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ 10 ಬಿಲಿಯನ್ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ತಮ್ಮ ಸುದೀರ್ಘ ಪಾದಯಾತ್ರೆಯ ನಾಲ್ಕನೇ ದಿನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಉಚ್ಚಾಟಿತ ಪ್ರಧಾನಿ, ಇಸ್ಲಾಮಾಬಾದ್ಗೆ ಪಾದಯಾತ್ರೆ ನಡೆಸುವ ಮೂಲಕ ಹಖೀಕಿ ಆಜಾದಿ(ನೈಜ ಸ್ವಾತಂತ್ರ್ಯ) ಗಳಿಸುವುದು ತಮ್ಮ ಉದ್ದೇಶವಾಗಿದೆ. ತಕ್ಷಣವೇ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆದರೆ ಅದು ಸಾಧ್ಯ ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯಸ್ಥ ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ ಐವರು ಸದಸ್ಯರ ಸಮಿತಿಯು 70 ವರ್ಷದ ಇಮ್ರಾನ್ ಖಾನ್ ಅವರನ್ನು ಪ್ರಸ್ತುತ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯತ್ವದಿಂದ ಅನರ್ಹಗೊಳಿಸಿತ್ತು.
"ಸಿಕಂದರ್ ಸುಲ್ತಾನ್, ನಾನು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ ... ಇದರಿಂದ ಭವಿಷ್ಯದಲ್ಲಿ, ಬೇರೆಯವರ ಸೂಚನೆ ಮೇರೆಗೆ ನೀವು ಬೇರೆ ಯಾರ ಪ್ರತಿಷ್ಠೆಯನ್ನು ಹಾಳು ಮಾಡಬಾರದು" ಎಂದು ಇಮ್ರಾನ್ ಖಾನ್ ಕಾಮೋಂಕಿಯಲ್ಲಿ ಹೇಳಿದ್ದಾರೆ.
Advertisement