ಕೂಡಲೇ ಯುದ್ಧ ನಿಲ್ಲಿಸಿ: ಉಕ್ರೇನ್-ರಷ್ಯಾಗೆ ಭಾರತ ಸಲಹೆ

ಉಕ್ರೇನ್‌ ಮೇಲಿನ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತವು ರಷ್ಯಾಗೆ ಕರೆ ನೀಡಿದ್ದು, ರಾಜತಾಂತ್ರಿಕ ಚರ್ಚೆಗಳ ಮೂಲಕ ಸಂಘರ್ಷ ಇತ್ಯರ್ಥಪಡಿಸಿಕೊಳ್ಳುವಂತೆ ಸಲಹೆ ನೀಡಿದೆ.
ಮೋದಿ-ಪುಟಿನ್
ಮೋದಿ-ಪುಟಿನ್

ನವದೆಹಲಿ: ಉಕ್ರೇನ್‌ ಮೇಲಿನ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತವು ರಷ್ಯಾಗೆ ಕರೆ ನೀಡಿದ್ದು, ರಾಜತಾಂತ್ರಿಕ ಚರ್ಚೆಗಳ ಮೂಲಕ ಸಂಘರ್ಷ ಇತ್ಯರ್ಥಪಡಿಸಿಕೊಳ್ಳುವಂತೆ ಸಲಹೆ ನೀಡಿದೆ.

ಕಳೆದ ವಾರ ಸಮರ್ಕಂಡ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದ ಪ್ರಧಾನಿ ಮೋದಿ ಉಕ್ರೇನ್ -ರಷ್ಯಾ ಯುದ್ಧದ ಕುರಿತು ಚರ್ಚೆ ನಡೆಸಿದ್ದು, ಯುದ್ದವನ್ನು ತಕ್ಷಣವೇ ನಿಲ್ಲಿಸಲು ಮತ್ತು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸುವ ಅಗತ್ಯವನ್ನು ಪದೇ ಪದೇ ಒತ್ತಿ ಹೇಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೊಸ ಸೇನೆ ಸಜ್ಜುಗೊಳಿಸುವ ಆದೇಶ ಮತ್ತು ತನ್ನ ದೇಶದ ಪ್ರದೇಶವನ್ನು ರಕ್ಷಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಮಾಡಿದ ಘೋಷಣೆಯ ಕೆಲ ದಿನಗಳ ನಂತರ ಭಾರತ, ರಷ್ಯಾಗೆ ಈ ಕರೆ ನೀಡಿದೆ.

ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಗ್ಚಿ ಅವರು, ‘ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದಂತೆ ಭಾರತದ ನಿಲುವು ಸಹ ಸ್ಪಷ್ಟ ಮತ್ತು ಸ್ಥಿರವಾಗಿದೆ’ಎಂದು ಪೂರ್ವ ಮತ್ತು ದಕ್ಷಿಣ ಉಕ್ರೇನ್‌ನ ರಷ್ಯಾದ ನಿಯಂತ್ರಿತ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ  ಉತ್ತರಿಸಿದರು. ‘ಇದು ಯುದ್ದದ ಯುಗವಲ್ಲ. ಪ್ರಜಾಪ್ರಭುತ್ವ, ರಾಜತಾಂತ್ರಿಕತೆ ಮತ್ತು ಮಾತುಕತೆಗಳು ಜಗತ್ತನ್ನು ಉಳಿಸುವ ವಿಷಯಗಳಾಗಿವೆ ಎಂದು ನಾವು ನಿಮ್ಮೊಂದಿಗೆ ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡಿದ್ದೇವೆ’ ಎಂದು ಪುಟಿನ್‌ಗೆ ಮೋದಿ ತಿಳಿಸಿರುವುದಾಗಿ ಬಾಗ್ಚಿ ಹೇಳಿದರು.

ಕಳೆದ ವಾರ ಸಮರ್ಕಂಡ್‌ನಲ್ಲಿ ಪುಟಿನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧವನ್ನು ನಿಲ್ಲಿಸುವ ಅಗತ್ಯವನ್ನು ಪುನರುಚ್ಚರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com