ನೇಪಾಳದ ಕಠ್ಮಂಡು ಚಿತ್ರಮಂದಿರಗಳಲ್ಲಿ 'ಆದಿಪುರುಷ' ಚಿತ್ರ ಪ್ರದರ್ಶನ ಸ್ಥಗಿತ

ರಾಮಾಯಣವನ್ನು ಆಧರಿಸಿದ ಚಿತ್ರವು ಸೀತೆಯ ಜನ್ಮಸ್ಥಳ ಕುರಿತಂತೆ 'ತಪ್ಪನ್ನು' ಸರಿಪಡಿಸದಿದ್ದರೆ ನೇಪಾಳ ರಾಜಧಾನಿಯಲ್ಲಿ ಯಾವುದೇ ಭಾರತೀಯ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಮೇಯರ್ ಬಲೇನ್ ಶಾ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಶುಕ್ರವಾರ ಕಠ್ಮಂಡುವಿನಾದ್ಯಂತ ಚಿತ್ರಮಂದಿರಗಳು 'ಆದಿಪುರುಷ' ಪ್ರದರ್ಶನವನ್ನು ನಿಲ್ಲಿಸಿದವು.
ಆದಿ ಪುರುಷ್  ಚಿತ್ರದಲ್ಲಿ ಪ್ರಭಾಸ್
ಆದಿ ಪುರುಷ್ ಚಿತ್ರದಲ್ಲಿ ಪ್ರಭಾಸ್
Updated on

ಕಠ್ಮಂಡು: ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಚಿತ್ರವು ಸೀತೆಯ ಜನ್ಮಸ್ಥಳ ಕುರಿತಂತೆ 'ತಪ್ಪನ್ನು' ಸರಿಪಡಿಸದಿದ್ದರೆ ನೇಪಾಳ ರಾಜಧಾನಿಯಲ್ಲಿ ಯಾವುದೇ ಭಾರತೀಯ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಮೇಯರ್ ಬಲೇನ್ ಶಾ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಶುಕ್ರವಾರ ಕಠ್ಮಂಡುವಿನಾದ್ಯಂತ ಚಿತ್ರಮಂದಿರಗಳು 'ಆದಿಪುರುಷ' ಪ್ರದರ್ಶನವನ್ನು ನಿಲ್ಲಿಸಿದವು.

ನೇಪಾಳ ಫಿಲ್ಮ್ ಯೂನಿಯನ್ ಕಠ್ಮಂಡುವಿನ ಎಲ್ಲಾ ಚಿತ್ರಮಂದಿರಗಳಲ್ಲಿ 'ಆದಿಪುರುಷ' ಸಿನಿಮಾದ ಪ್ರದರ್ಶನವನ್ನು ನಿಲ್ಲಿಸುವಂತೆ ಒತ್ತಾಯಿಸಿದೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಂಡ ನಂತರವೇ ಚಿತ್ರ ಬಿಡುಗಡೆ ಮಾಡಲು ರಾಜಧಾನಿಯ ಹೊರಗಿನ ಚಿತ್ರಮಂದಿರಗಳಿಗೆ ಸೂಚಿಸಿದೆ.

ಗುರುವಾರ ಟ್ವೀಟ್ ಮಾಡಿರುವ ಮೇಯರ್, ‘ಆದಿಪುರುಷ’ದಲ್ಲಿ ‘ಸೀತೆ ಭಾರತದ ಮಗಳು’ ಎಂದು ನಮೂದಿಸಲಾಗಿದೆ. ಭಾರತ ಮತ್ತು ನೇಪಾಳದಲ್ಲಿ ಚಿತ್ರದಲ್ಲಿನ ಈ ತಪ್ಪನ್ನು ಸರಿಪಡಿಸುವವರೆಗೂ ಯಾವುದೇ ಭಾರತದ ಸಿನಿಮಾವನ್ನು ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಮಿತಿಯಲ್ಲಿ ಪ್ರದರ್ಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.

ಚಿತ್ರವನ್ನು ಓಂ ರಾವುತ್ ಬರೆದು ನಿರ್ದೇಶಿಸಿದ್ದು, ಟಿ-ಸೀರೀಸ್ ಮತ್ತು ರೆಟ್ರೋಫಿಲ್ಸ್ ನಿರ್ಮಿಸಿದೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ಭಾರತದಲ್ಲೂ ವಿವಾದವನ್ನು ಸೃಷ್ಟಿಸಿದೆ.

ನೇಪಾಳದ ಕ್ಯೂಎಫ್‌ಎಕ್ಸ್ ಸಿನಿಮಾಸ್ ಹೇಳಿಕೆಯಲ್ಲಿ, 'ನಮ್ಮ ವೀಕ್ಷಕರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕ್ಯೂಎಫ್‌ಎಕ್ಸ್‌ನಲ್ಲಿ ‘ಆದಿಪುರುಷ’ ಸಿನಿಮಾ ಪ್ರದರ್ಶಿಸುತ್ತಿಲ್ಲ. ನಾವು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಈ ಸಮಸ್ಯೆ ಬಗೆಹರಿದ ತಕ್ಷಣ ನಾವು ಮತ್ತೊಂದು ನೋಟಿಸ್ ನೀಡುತ್ತೇವೆ ಮತ್ತು ನಮ್ಮ ವೀಕ್ಷಕರಿಗೆ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ' ಎಂದಿದೆ.

ನೇಪಾಳದ ಸೆನ್ಸಾರ್ ಮಂಡಳಿಯು ಇದೇ ಕಾರಣಕ್ಕಾಗಿ ಹಿಂದೂ ಭಾರತೀಯ ಮಹಾಕಾವ್ಯ 'ರಾಮಾಯಣ' ಆಧಾರಿತ ಸಿನಿಮಾ ಪ್ರದರ್ಶನದ ಅನುಮತಿಯನ್ನು ತಡೆಹಿಡಿಯಲು ನಿರ್ಧರಿಸಿದೆ. 

ರಾಮಾಯಣದ ಪ್ರಕಾರ, ಸೀತೆ ನೇಪಾಳದ ಜನಕಪುರದಲ್ಲಿ ಜನಿಸಿದಳು ಮತ್ತು ರಾಮನು ಬಂದು ಅವಳನ್ನು ಮದುವೆಯಾದನು.

ಮೇಯರ್ ಬಲೇನ್ ಶಾ ಅವರಲ್ಲದೆ, ವಿವಿಧ ರಾಜಕೀಯ ಪಕ್ಷಗಳ ಕೆಲವು ಸಹೋದರ ಸಂಘಟನೆಗಳು ಸಹ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿವೆ ಮತ್ತು ಚಲನಚಿತ್ರ ನಿರ್ಮಾಪಕರು ಸೀತಾ ಜನ್ಮಸ್ಥಳದ ಬಗ್ಗೆ ತಪ್ಪುಗಳನ್ನು ಸರಿಪಡಿಸುವವರೆಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com