ಉಗ್ರವಾದ ಮನುಕುಲದ ಶತ್ರು, ಅದಕ್ಕೆ ಯಾವುದೇ ಸಮರ್ಥನೆ, ಕ್ಷಮೆ ಇಲ್ಲ: ಯುಎಸ್ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ

ಉಗ್ರವಾದ ಮನುಕುಲದ ಶತ್ರು, ಅದಕ್ಕೆ ಯಾವುದೇ ಸಮರ್ಥನೆಗಳಾಗಲೀ, ಕ್ಷಮೆಯಾಗಲೀ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಕಾಂಗ್ರೆಸ್ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಕಾಂಗ್ರೆಸ್ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ ಟನ್: ಉಗ್ರವಾದ ಮನುಕುಲದ ಶತ್ರು, ಅದಕ್ಕೆ ಯಾವುದೇ ಸಮರ್ಥನೆಗಳಾಗಲೀ, ಕ್ಷಮೆಯಾಗಲೀ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಅಮೇರಿಕಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ, ಜಂಟಿ ಸುದ್ದಿಗೋಷ್ಠಿಯ ಬಳಿಕ ಕಾಂಗ್ರೆಸ್ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಯುಎಸ್ ನ ಕಾಂಗ್ರೆಸ್ ನ್ನುದ್ದೇಶಿಸಿ ಮಾತನಾಡುವುದು ಎಂದಿಗೂ ಅತ್ಯಂತ ಗೌರವದ ಸಂಗತಿಯಾಗಿದ್ದು, ಎರಡು ಬಾರಿ ಕಾಂಗ್ರೆಸ್ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ಲಭಿಸಿದ್ದು ಅಸಾಧಾರಣವಾದುದ್ದಾಗಿದೆ. ಈ ಗೌರವಕ್ಕಾಗಿ ನಾನು ಭಾರತದ 1.4 ಶತಕೋಟಿ ಜನರಿಗೆ ನನ್ನ ಆಳವಾದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮಲ್ಲಿ ಅರ್ಧದಷ್ಟು ಮಂದಿ 2016 ರಲ್ಲಿಯೂ ಇಲ್ಲಿ ಇದ್ದರು. ಹಳೆಯ ಸ್ನೇಹಿತರಲ್ಲಿ ಹಾಗೂ ಇನ್ನರ್ಧ ಇರುವ ಹೊಸ ಸ್ನೇಹಿತರಲ್ಲಿ ನಾನು ಉತ್ಸಾಹವನ್ನು ಕಾಣುತ್ತಿದ್ದೇನೆ ಎಂದು ಮೋದಿ ಜಂಟಿ ಸದಸನದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. 

ತಮ್ಮ ಭಾಷಣದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವು ಪ್ರಕಟಿಸಿದ ಪ್ರಧಾನಿ ಮೋದಿ, ಉಗ್ರವಾದ ಮನುಕುಲದ ಶತ್ರು, ಅದಕ್ಕೆ ಯಾವುದೇ ಸಮರ್ಥನೆಗಳಾಗಲೀ, ಕ್ಷಮೆಯಾಗಲೀ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

9/11 ನ ಎರಡು ದಶಕಗಳು ಹಾಗೂ ಮುಂಬೈ ನ 26/11 ಘಟಿಸಿದ ಒಂದು ದಶಕಗಳ ಬಳಿಕವೂ ತೀವ್ರವಾದ ಹಾಗೂ ಭಯೋತ್ಪಾದನೆ ಜಗತ್ತಿನ್ನು ಕಾಡುತ್ತಿರ ಆಪತ್ತಾಗಿಯೇ ಉಳಿದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ. 

ಭಯೋತ್ಪಾದನೆ ವಿಷಯದಲ್ಲಿ ಸಮರ್ಥನೆ, ಕ್ಷಮೆಗಳಿಗೆ ಅವಕಾಶವಿಲ್ಲ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಹಾಗೂ ರಪ್ತು ಮಾಡುತ್ತಿರುವ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ.

ಈ ಹಿಂದೆ ನಾನು ಇಲ್ಲಿನ ಭಾಷಣದಲ್ಲಿ ಇತಿಹಾಸದ ಹಿಂಜರಿಕೆಗಳು ನಮ್ಮ ಹಿಂದೆ ಇದ್ದವು ಎಂದು ಹೇಳಿದ್ದೆ. ಈಗ ನಮ್ಮ ಕಾಲಘಟ್ಟ ನಿರ್ಣಾಯಕವಾಗಿದೆ ಹಾಗೂ ನಾನು ಈಗ ಇಲ್ಲಿ ಈ ಶತಮಾನಕ್ಕೆ ನಮ್ಮ ಕರೆಯ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅಂತೆಯೇ ಮತ್ತೊಂದು ಎ-ಐ (ಅಮೇರಿಕಾ- ಇಂಡಿಯಾ)ನಲ್ಲಿಯೂ ಮಹತ್ವದ ಬೆಳವಣಿಗೆಗಳಾಗಿವೆ ಎಂದು ಮೋದಿ ಭಾರತ- ಅಮೇರಿಕಾದ ಸ್ನೇಹ ಗಾಢವಾಗಿದ್ದನ್ನು ಉಲ್ಲೇಖಿಸಿದ್ದಾರೆ.

"ನಾನು ತಾಳ್ಮೆ, ಮನವೊಲಿಕೆ ಮತ್ತು ನೀತಿಯ ಯುದ್ಧಗಳ ಸಂಬಂಧಗಳನ್ನು ಹೊಂದಿಸಿಕೊಳ್ಳಬಲ್ಲೆ. ನಾನು ವಿಚಾರಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಬಾಂಧವ್ಯವನ್ನು ಆಚರಿಸಲು ನೀವು ಒಟ್ಟಿಗೆ ಬಂದಿರುವುದನ್ನು ನೋಡಲು ನನಗೆ ಸಂತೋಷವಾಗಿದೆ, ”ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಅಮೇರಿಕಾದ ಕಾಂಗ್ರೆಸ್ ನಲ್ಲಿ ಭಾರತೀಯ- ಅಮೇರಿಕನ್ನರು ಹೆಚ್ಚುತ್ತಿರುವುದರ ಬಗ್ಗೆಯೂ ಮಾತನಾಡಿರುವ ಪ್ರಧಾನಿ, ಸಮೋಸಾ ಕಾಕಸ್ ಈಗ ಸದನದ ರುಚಿಯಾಗಿದೆ ಎಂಬುದನ್ನು ಕೇಳಿದ್ದೇನೆ. ಇದು ಇನ್ನೂ ಬೆಳವಣಿಗೆಯಾಗಿ, ಇಲ್ಲಿ ಭಾರತೀಯ ಪಾಕಪದ್ಧತಿಯ ಸಂಪೂರ್ಣ ವೈವಿಧ್ಯತೆಯನ್ನು ತರುತ್ತದೆ ಎಂದು ಮೋದಿ ಹೇಳಿದ್ದಾರೆ.

ಸಮಾನ ಜನರ ರಾಷ್ಟ್ರದ ಕಲ್ಪನೆಯ ಮೇಲೆ ಅಮೇರಿಕಾದ ಬುನಾದಿ ಸ್ಪೂರ್ತಿಗೊಂಡಿದೆ. ಭಾರತದ ಮೂಲದ ಮಿಲಿಯನ್ ಜನರು ಇಲ್ಲಿದ್ದಾರೆ. ಅದರಲ್ಲಿ ಕೆಲವರು ಈ ಸದನದಲ್ಲಿಯೂ ಇದ್ದಾರೆ, ಆ ಪೈಕಿ ಒಬ್ಬರು ನನ್ನ ಹಿಂದೆಯೇ ಇದ್ದಾರೆ ಎಂದು ಮೋದಿ ಅಮೇರಿಕಾ ಉಪಾಧ್ಯಕ್ಷ್ಯೆ ಕಮಲಾ ಹ್ಯಾರೀಸ್ ಅವರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಉಕ್ರೇನ್- ರಷ್ಯಾ ಯುದ್ಧಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿರುವ ಪ್ರಧಾನಿ ಮೋದಿ ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದು, ಇದು ಯುದ್ಧದ ಸಮಯವಲ್ಲ, ಮಾತುಕತೆ ಮತ್ತು ರಾಜತಾಂತ್ರಿಕದ ಸಮಯ ಎಂದು ನೇರವಾಗಿ ಹಾಗು ಸಾರ್ವಜನಿಕವಾಗಿ ಹೇಳಿದ್ದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com