ಹಿಂದೂ ದೇಗುಲಗಳ ಮೇಲೆ ದಾಳಿ: ಮಾಸ್ಟರ್ಮೈಂಡ್ ಖಲಿಸ್ತಾನಿ ಉಗ್ರ Inderjeet Gosal ಬಂಧನ ಬೆನ್ನಲ್ಲೇ ಬಿಡುಗಡೆ
ನವದೆಹಲಿ: ಕೆನಡಾದಲ್ಲಿ ಇತ್ತೀಚಿಗೆ ನಡೆದ ಹಿಂದೂ ದೇಗುಲಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಹಿಂದಿನ ಪ್ರಮುಖ ಮಾಸ್ಟರ್ಮೈಂಡ್ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಹೌದು.. ಕಳೆದ ಭಾನುವಾರ ಗ್ರೇಟರ್ ಟೊರೊಂಟೊ ಏರಿಯಾ (ಜಿಟಿಎ) ಯಲ್ಲಿನ ಹಿಂದೂ ದೇವಾಲಯದ (Hindu Temple) ಮೇಲೆ ದಾಳಿ ನಡೆಸಲು ಕಾರಣವಾದ ಖಲಿಸ್ತಾನಿ (Khalistani Leader Arrested) ಉಗ್ರ ಇಂದರ್ಜೀತ್ ಗೋಸಾಲ್ ಎಂಬಾತನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಉಗ್ರ 35 ವರ್ಷದ ಇಂದರ್ಜೀತ್ ಗೋಸಾಲ್ ಸಪೀಲ್ ಪ್ರಾದೇಶಿಕ ಪೋಲೀಸ್ (PRP) ಬ್ರಾಂಪ್ಟನ್ ನಿವಾಸಿ ಎಂದು ತಿಳಿದುಬಂದಿದೆ. ಬ್ರಾಂಪ್ಟನ್ನಲ್ಲಿರುವ ಒಂಟಾರಿಯೊ ಕೋರ್ಟ್ ಆಫ್ ಜಸ್ಟಿಸ್ಗೆ ಆತನನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಕೆನಡಾ ಪೊಲೀಸ್ ಪ್ರಕಟಣೆ ತಿಳಿಸಿದೆ.
ಹಿಂದೂ ದೇಗುಲಗಳ ಮೇಲೆ ದಾಳಿಯ ಮಾಸ್ಟರ್ಮೈಂಡ್
ಇತ್ತೀಚೆಗೆ ಕೆನಡಾದಲ್ಲಿನ ಹಿಂದೂ ದೇವಾಲಗಳ ಮೇಲಿನ ದಾಳಿಯಲ್ಲಿ ಇದೇ ಇಂದರ್ಜೀತ್ ಗೋಸಾಲ್ ಪ್ರಮುಖ ಮಾಸ್ಟರ್ಮೈಂಡ್ ಎನ್ನಲಾಗಿದೆ. ಕೆನಡಾದಲ್ಲಿ ಖಲಿಸ್ತಾನ್ ಪರ ಜನಾಭಿಪ್ರಾಯ ಸಂಗ್ರಹಿಸಿ, ಹಿಂದೂ ದೇಗುಲ ಮತ್ತು ಹಿಂದೂಗಳ ಮೇಲೆ ದಾಳಿ ನಡೆಸಲು ಪ್ಲಾನ್ ರೂಪಿಸುತ್ತಿದ್ದ ತಂಡದಲ್ಲಿ ಈತನೇ ಪ್ರಮುಖ ವ್ಯಕ್ತಿಯಾಗಿದ್ದ. ಈತನ ವಿರುದ್ಧ ಮಾರಕಾಯುಧದಿಂದ ಹಲ್ಲೆ ಮಾಡಿದ ಆರೋಪವೂ ಇದೆ.
ನವೆಂಬರ್ 8 ರಂದು ಹಿಂದೂ ಸಭಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕೆನಡಾದ ಹಿಂದೂ ಭಕ್ತರ ಮೇಲೆ ದಾಳಿ ಮಾಡಲಾಗಿತ್ತು. ದಿ ಗೋರ್ ರೋಡ್ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಹಿಂದೂಗಳ ಮೇಲೆ ದಾಳಿ ನಡೆಸಿ ದೈಹಿಕ ಹಿಂಸೆ ಮಾಡಲಾಗಿತ್ತು. ಕೆಲವು ಖಲಿಸ್ತಾನಿ ಧ್ವಜಗಳನ್ನು ಹಿಡಿದು ಕೋಲುಗಳಿಂದ ಹಲ್ಲೆ ನಡೆಸಿದ್ದರು.
ಬಂಧನ ಬೆನ್ನಲ್ಲೇ ಬಿಡುಗಡೆ
ಇಂದರ್ಜೀತ್ ಗೋಸಾಲ್ ನನ್ನು ಬಂಧನ ಕೆಲವೇ ಗಂಟೆಗಳಲ್ಲಿ ಷರತ್ತುಗಳ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ ಆರೋಪಿ ಇಂದರ್ಜೀತ್ ಗೋಸಾಲ್ನನ್ನು ಷರತ್ತುಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಆತನಿಗೆ ಸೂಚಿಸಲಾಗಿದೆ. ನವೆಂಬರ್ 3 ಮತ್ತು 4ರಂದು ನಡೆದ ಘಟನೆಗಳ ಬಗ್ಗೆ ತನಿಖೆ ಮುಂದುವರಿಸಲು ಪೊಲೀಸರು ತನಿಖಾ ತಂಡವನ್ನು ರಚಿಸಿದ್ದಾರೆ. ಈ ಪ್ರಕರಣದ ಪೊಲೀಸರು ತನಿಖೆ ನಡೆಸಿದ ಪೊಲೀಸರು ವಿಡಿಯೋಗಳನ್ನು ಆಧರಿಸಿ ಶಂಕಿತರನ್ನು ಗುರುತಿಸಲು ಪ್ರಯತ್ನಪಟ್ಟಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದೆ.
ಗುರುಪತ್ವಂತ್ ಪನ್ನುನ್ ಬಲಗೈ ಬಂಟ
ಅಂದಹಾಗೆ ಇಂದರ್ಜಿತ್ ಗೋಸಾಲ್ ಖಲಿಸ್ತಾನಿ ಪರ ಹೋರಾಡುವ ನಾಯಕ ಎಂದು ಪರಿಗಣಿಸಲಾಗಿದೆ. ಗುರುಪತ್ವಂತ್ ಪನ್ನುನ್ ಅವರ ಲೆಫ್ಟಿನೆಂಟ್. ಕಳೆದ ವರ್ಷ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಾದ ನಂತರ ಈತನನ್ನು ಕೆನಡಾದಲ್ಲಿ ಜನಾಭಿಪ್ರಾಯ ಸಂಗ್ರಹದ ಮುಖ್ಯ ಸಂಘಟಕನನ್ನಾಗಿ ನೇಮಿಸಲಾಯಿತು. ಕೆನಡಾದ ಪೋಲಿಸ್ ಪ್ರಕಾರ, ಖಲಿಸ್ತಾನ್ ಪರ ಹೋರಾಟಗಳನ್ನು ಗುರಿಯಾಗಿಟ್ಟುಕೊಂಡು ಹಿಂಸಾತ್ಮಕ ಅಪರಾಧ ಚಟುವಟಿಕೆ ನಡೆಸುತ್ತಿರುವ 13 ಕೆನಡಿಯನ್ನರಲ್ಲಿ ಗೋಸಲ್ ಕೂಡ ಸೇರಿದ್ದಾನೆ ಎಂದು ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ