
ಬ್ಯಾಂಕಾಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರನ್ನು ಬ್ಯಾಂಕಾಕ್ ನಲ್ಲಿ ಭೇಟಿ ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ.
ಬಂಗಾಳ ಕೊಲ್ಲಿ ಬಹು-ವಲಯ ಮತ್ತು ತಾಂತ್ರಿಕ ಸಹಕಾರ (BIMSTEC) ಗುಂಪಿನ ನಾಯಕರ ಶೃಂಗಸಭೆಯ ಹೊರಗೆ ಉಭಯ ನಾಯಕರು ಭೇಟಿ ಮಾಡಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಮುಂಬರುವ BIMSTEC ಶೃಂಗಸಭೆಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಲಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿದ ನಂತರ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರ ಮತ್ತು ಅಲ್ಲಿ ಕಟ್ಟಾ ಇಸ್ಲಾಮಿಕ್ ಶಕ್ತಿಗಳ ಬಲವರ್ಧನೆ ಬಗ್ಗೆ ಭಾರತದ ಆತಂಕ ನಡುವೆ ಉಭಯ ದೇಶಗಳ ಸಂಬಂಧ ಕುಸಿದಿದೆ.
ಕಳೆದ ವಾರ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮೊಹಮ್ಮದ್ ಯೂನುಸ್, ಚೀನಾ ತನ್ನ ಆರ್ಥಿಕ ಪ್ರಭಾವವನ್ನು ಬಾಂಗ್ಲಾದೇಶಕ್ಕೆ ವಿಸ್ತರಿಸುವಂತೆ ಒತ್ತಾಯಿಸಿದ್ದರು. ಭಾರತದ ಏಳು ಈಶಾನ್ಯ ರಾಜ್ಯಗಳು ಭೂಆವೃತ ಪ್ರದೇಶವಾಗಿದ್ದು, ಸಾಗರವನ್ನು ತಲುಪಲು ಯಾವುದೇ ಮಾರ್ಗವಿಲ್ಲ, ನಮಗೆ ಅಡ್ಡಿಯಾಗಿದೆ ಎಂದು ಹೇಳಿದ್ದರು.
ಬಾಂಗ್ಲಾದೇಶವನ್ನು ಈ ಪ್ರದೇಶದಲ್ಲಿ ಸಾಗರದ ಏಕೈಕ ರಕ್ಷಕ ಎಂದು ಕರೆದ ಅವರು, ಇದು ಒಂದು ದೊಡ್ಡ ಅವಕಾಶವಾಗಬಹುದು, ಚೀನಾದ ಆರ್ಥಿಕತೆಯ ವಿಸ್ತರಣೆಯಾಗಿರಬಹುದು ಎಂದು ಹೇಳಿದ್ದರು. ಈ ಹೇಳಿಕೆ ಭಾರತಕ್ಕೆ ಇಷ್ಟವಾಗಿರಲಿಲ್ಲ. ಯೂನಸ್ ಅವರ ಹೇಳಿಕೆಗೆ ಬಾಂಗ್ಲಾದೇಶ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
Advertisement