
ಲಂಡನ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ವಿಚಾರವಾಗಿ ಇಡೀ ಜಗತ್ತು ಖಂಡಿಸುತ್ತಿದ್ದು, ಆದರೆ ಪಾಕಿಸ್ತಾನ ಪ್ರಧಾನಿ Shehbaz Sharif ಮಾತ್ರ ಈ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನಿಶ್ ಕನೇರಿಯಾ ಹೇಳಿದ್ದಾರೆ.
ಭಾರತದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದು, ಈ ಭೀಕರ ಕೃತ್ಯವನ್ನು ಅಮೆರಿಕ, ರಷ್ಯಾ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ನಾನಾ ದೇಶಗಳು ಖಂಡಿಸುತ್ತಿದ್ದು, ಆದರೆ ನೆರೆಯ ಪಾಕಿಸ್ತಾನ ಪ್ರಧಾನಿ ಮಾತ್ರ ಈ ಕುರಿತು ಈ ವರೆದೂ ಒಂದು ಒಂದು ಹೇಳಿಕೆ ನೀಡಿಲ್ಲ.
ಈ ಬಗ್ಗೆ ಇದೀಗ ಸ್ವತಃ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನಿಶ್ ಕನೇರಿಯಾ ಕಿಡಿಕಾರಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ಅವರ ಮೌನಕ್ಕಾಗಿ ಕನೇರಿಯಾ ಸಾರ್ವಜನಿಕವಾಗಿ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಕನೇರಿಯಾ, 'ಭಾರತದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಿಜವಾಗಿಯೂ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲದಿದ್ದರೆ, ಪ್ರಧಾನಿ ಶೆಹಬಾಶ್ ಶರೀಫ್ ಇನ್ನೂ ಅದನ್ನು ಏಕೆ ಖಂಡಿಸಿಲ್ಲ? ನಿಮ್ಮ ಪಡೆಗಳು ಇದ್ದಕ್ಕಿದ್ದಂತೆ ಏಕೆ ಜಾಗರೂಕವಾಗಿವೆ? ಏಕೆಂದರೆ ಆಳವಾಗಿ, ನಿಮಗೆ ಸತ್ಯ ತಿಳಿದಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು' ಎಂದು ಖಂಡಿಸಿದ್ದಾರೆ.
ಈ ಹಿಂದೆ, ಇದೇ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಭಾರಿ ತಾರತಮ್ಯವನ್ನು ಎದುರಿಸಿದ್ದೇನೆ ಮತ್ತು ತನ್ನ ವೃತ್ತಿಜೀವನ ನಾಶವಾಗಿದೆ. ಪಾಕಿಸ್ತಾನದಲ್ಲಿ ತನಗೆ ಸಮಾನ ಮೌಲ್ಯಗಳು ಮತ್ತು ಗೌರವ ಸಿಗಲಿಲ್ಲ ಎಂದು ಆರೋಪಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಏಪ್ರಿಲ್ 22, 2025 ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಪ್ರಾತಿನಿಧಿಕ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಟಿಆರ್ ಎಫ್ ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲವಿದ್ದು, ಟಿಆರ್ಎಫ್ ಅನ್ನು 26/11 ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಎಲ್ಇಟಿ ಸಂಘಟನೆಯ ಅಂಗಸಂಸ್ಥೆ ಎಂದು ಪರಿಗಣಿಸಲಾಗಿದೆ.
Advertisement