
ವಾಷಿಂಗ್ಟನ್: 26/11ರ ಮುಂಬೈ ದಾಳಿಯ ಅಪರಾಧಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುವ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ಪ್ರಕರಣದಲ್ಲಿ ರಾಣಾ ಮೇಲೆ ದೋಷಾರೋಪಣೆ ವಿರುದ್ಧದ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
2008 ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಕೋರಲಾಗಿತ್ತು. ಭಾರತಕ್ಕೆ ಗಡೀಪಾರು ಮಾಡದಿರಲು ರಾಣಾನಿಗೆ ಇದ್ದ ಕೊನೆಯ ಕಾನೂನು ಅವಕಾಶ ಕೈತಪ್ಪಿದ್ದು, ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ಇದಕ್ಕೂ ಮೊದಲು, ಸ್ಯಾನ್ ಫ್ರಾನ್ಸಿಸ್ಕೋದ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಫಾರ್ ದಿ ನಾರ್ತ್ ಸರ್ಕ್ಯೂಟ್ ಸೇರಿದಂತೆ ಹಲವಾರು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದಲ್ಲಿ ತಹವ್ವೂರ್ ರಾಣಾಗೆ ಸೋಲು ಉಂಟಾಗಿತ್ತು.
ಕಳೆದ ವರ್ಷ ನವೆಂಬರ್ 13 ರಂದು, ರಾಣಾ ಯುಎಸ್ ಸುಪ್ರೀಂ ಕೋರ್ಟ್ನಲ್ಲಿ ಸರ್ಟಿಯೊರಾರಿ ರಿಟ್ ಅರ್ಜಿ ಸಲ್ಲಿಸಿದ್ದನು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಜನವರಿ 21 ರಂದು ಸುಪ್ರೀಂ ಕೋರ್ಟ್ ಇದನ್ನು ನಿರಾಕರಿಸಿತು.
ರಾಣಾ, ಪ್ರಸ್ತುತ ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್ನಲ್ಲಿ ಬಂಧಿತನಾಗಿದ್ದಾನೆ. ಕಳೆದ ತಿಂಗಳು ಕ್ಯಾಲಿಫೋರ್ನಿಯಾದ ಜಿಲ್ಲಾ ಕೇಂದ್ರ ಕೋರ್ಟ್ 26/11 ದಾಳಿಯ ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು.
Advertisement