
ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರದಾಳಿ ಬಳಿಕ ಭಾರತದಿಂದ ಸೇನಾದಾಳಿ ನಡೆಯುವ ಆತಂಕದಲ್ಲಿರುವ ಪಾಕಿಸ್ತಾನ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ಭಾರತದ ಯಾವುದೇ 'ಮಿಲಿಟರಿ ದುಸ್ಸಾಹಸ'ಕ್ಕೆ ಮುಂದಾದರೆ ಪಶ್ಚಾತ್ತಾಪ ಪಡುವಂತೆ 'ತ್ವರಿತ, ದೃಢ ಪ್ರತಿಕ್ರಿಯೆ' ನೀಡುತ್ತೇವೆ ಎಂದು ಹೇಳಿದೆ.
ಪಹಲ್ಗಾಮ್ ದಾಳಿ ಬಳಿಕ ಬಂಕರ್ ನಲ್ಲಿ ಅವಿತಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಗುರುವಾರ ಭಾರತದ ಯಾವುದೇ 'ಮಿಲಿಟರಿ ದುಸ್ಸಾಹಸ'ಕ್ಕೆ 'ತ್ವರಿತ, ದೃಢ ಮತ್ತು ನಾಚ್-ಅಪ್ ಪ್ರತಿಕ್ರಿಯೆ' ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದು ಯಾವುದೇ ಕ್ಷಣದಲ್ಲೂ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು. ಸೇನಾ ದಾಳಿ ಮೂಲಕ ಭಾರತ ಪ್ರತೀಕಾರ ತೀರಿಸಿಕತೊಳ್ಳಲಿದೆ ಎಂದು ಪಾಕಿಸ್ತಾನ ಸರ್ಕಾರ ಆತಂಕ ವ್ಯಕ್ತಪಡಿಸುತ್ತಲೇ ಇದೆ. ಇದೇ ವಿಚಾರವಾಗಿ ಇದೀಗ ಪಾಕ್ ಸೇನಾ ಮುಖ್ಯಸ್ಥ ಮತ್ತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
'ಭಾರತ ಪಾಕ್ ಮೇಲೆ ಯಾವುದೇ 'ಮಿಲಿಟರಿ ದುಸ್ಸಾಹಸ'ಕ್ಕೆ ಮುಂದಾದರೆ ಪಶ್ಚಾತ್ತಾಪ ಪಡುವಂತೆ 'ತ್ವರಿತ, ದೃಢ ಪ್ರತಿಕ್ರಿಯೆ' ನೀಡುತ್ತೇವೆ. ಪಾಕಿಸ್ತಾನವು ಪ್ರಾದೇಶಿಕ ಶಾಂತಿಗೆ ಬದ್ಧವಾಗಿದ್ದರೂ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ನಮ್ಮ ಸನ್ನದ್ಧತೆ ಮತ್ತು ಸಂಕಲ್ಪವಾಗಿದೆ' ಎಂದು ಟಿಲ್ಲಾ ಫೈಲ್ಡ್ ಫೈರಿಂಗ್ ರೇಂಜ್ಗಳಲ್ಲಿ (TFFR) ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು ಎಂದು ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ (APP) ಉಲ್ಲೇಖಿಸಿ ವರದಿ ಮಾಡಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಇಲ್ಲಿನ TFFR ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಇಲ್ಲಿ ನಡೆಯುತ್ತಿದ್ದ ಹ್ಯಾಮರ್ ಸ್ಟ್ರೈಕ್ ಕಾರ್ಪ್ಸ್ ನಡೆಸಿದ ಸೇನಾ ತರಬೇತಿ ಎಕ್ಸರ್ಸೈಸ್ ಹ್ಯಾಮರ್ ಸ್ಟ್ರೈಕ್ ಅನ್ನು ವೀಕ್ಷಿಸಿದರು. ಯುದ್ಧ ಸಿದ್ಧತೆ, ಯುದ್ಧಭೂಮಿ ಸಿನರ್ಜಿ ಮತ್ತು ಯುದ್ಧಭೂಮಿಗೆ ಸಮೀಪವಿರುವ ಪರಿಸ್ಥಿತಿಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಕಾರ್ಯಾಚರಣೆಯ ಏಕೀಕರಣವನ್ನು ಮೌಲ್ಯೀಕರಿಸಲು ಈ ವ್ಯಾಯಾಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅದು ಪಾಕ್ ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಹು ಪಾತ್ರಧಾರಿ ಯುದ್ಧ ವಿಮಾನಗಳು, ಯುದ್ಧ ವಾಯುಯಾನ ಸ್ವತ್ತುಗಳು, ದೀರ್ಘ-ಶ್ರೇಣಿಯ ನಿಖರ ಫಿರಂಗಿದಳಗಳು ಮತ್ತು ಮುಂದಿನ ಪೀಳಿಗೆಯ ಕ್ಷೇತ್ರ ಎಂಜಿನಿಯರಿಂಗ್ ತಂತ್ರಗಳು ಸೇರಿದಂತೆ ವೈವಿಧ್ಯಮಯ ಸುಧಾರಿತ ಸಾಮರ್ಥ್ಯಗಳನ್ನು ಸಾಂಪ್ರದಾಯಿಕ ಯುದ್ಧಭೂಮಿ ಸನ್ನಿವೇಶಗಳನ್ನು ಅನುಕರಿಸಲು ಬಳಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಅಂದಹಾಗೆ ಭಾರತೀಯ ಕ್ರಮದ ಬೆದರಿಕೆಯಿಂದಾಗಿ ಮುಂದಿನ 36 ಗಂಟೆಗಳು ನಿರ್ಣಾಯಕವಾಗಿರುತ್ತದೆ ಎಂದು ಪಾಕಿಸ್ತಾನ ಬುಧವಾರ ಎಚ್ಚರಿಸಿತ್ತು. ಆದಾಗ್ಯೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಎರಡೂ ದೇಶಗಳ ನಾಯಕರನ್ನು ಕರೆದು ಸಂಯಮವನ್ನು ಅನುಸರಿಸುತ್ತಾ ಉದ್ವಿಗ್ನತೆಯನ್ನು ತಗ್ಗಿಸಲು ಸಹಕರಿಸುವಂತೆ ಒತ್ತಾಯಿಸಿದರು.
Advertisement