
ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಪರಿಸ್ಥಿತಿ ಕುರಿತು ಚರ್ಚಿಸಲು ಶೀಘ್ರದಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ (UNSC) ನಡೆಯಲಿದೆ. ಇದು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಒಂದು ಅವಕಾಶವಾಗಿದೆ ಎಂದು ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.
ಪರಮಾಣು ಸಶಸ್ತ್ರ ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪಿಟಿಐ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಶ್ವಸಂಸ್ಥೆಯ ಗ್ರೀಸ್ನ ಖಾಯಂ ಪ್ರತಿನಿಧಿ ಮತ್ತು ಮೇ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷ ಇವಾಂಜೆಲೋಸ್ ಸೆಕೆರಿಸ್, ಖಂಡಿತವಾಗಿಯೂ, ಸಭೆಗಾಗಿ ಮನವಿ ಬಂದರೆ, ನಾವು ಸಭೆ ನಡೆಸಬೇಕು ಎಂದು ಭಾವಿಸುತ್ತೇವೆ. ಏಕೆಂದರೆ, ನಾವು ಹೇಳಿದಂತೆ, ಬಹುಶಃ ಇದು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶವಾಗಿದ್ದು, ಸ್ವಲ್ಪ ಉದ್ವಿಗ್ನತೆ ಕಡಿಮೆ ಮಾಡಲು ನೆರವಾಗುತ್ತದೆ ಎಂದರು.
ನಾವು ಉಭಯ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಸಭೆ ನಡೆಯಬೇಕಾಗಿದೆ. ಈ ಕುರಿತು ಶೀಘ್ರದಲ್ಲೇ ಹೇಳುತ್ತೇನೆ. ಈ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದೇವೆ. ಇದು ನಮ್ಮ (UNSC)ಅಧ್ಯಕ್ಷತೆಯ ಮೊದಲ ದಿನವಾಗಿದೆ ಎಂದು ತಿಳಿಸಿದರು.
ಗುರುವಾರ ಇದೇ ವಿಚಾರ ಕುರಿತು ಪ್ರತಿಕ್ರಿಯಿಸಿದ್ದ ಸೆಕರಿಸಿಸ್, ತುಂಬಾ ಪ್ರಸ್ತುತವಾದ ವಿಷಯವಾಗಿದೆ. ನಾನು ಮೊದಲೇ ಹೇಳಿದಂತೆ ಪಹಲ್ಗಾಮ್ ನಲ್ಲಿ ಉಗ್ರರ ಹೀನ ದಾಳಿಯಿಂದ ಅಮಾಯಕರ ಹತ್ಯೆಯನ್ನು ಬಲವಾಗಿ ಖಂಡಿಸುತ್ತೇವೆ" ಎಂದು ಹೇಳಿದರು.
ಭಯೋತ್ಪಾದನೆ ಎಲ್ಲೆಡೆ ನಡೆಯುತ್ತಿದೆ. ಮತ್ತೊಂದೆಡೆ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಈ ಉದ್ವಿಗ್ನತೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಖಂಡಿತವಾಗಿಯೂ ಭಾರತವು ಪಾಕಿಸ್ತಾನಕ್ಕಿಂತ ದೊಡ್ಡದಾಗಿದೆ. ಎರಡೂ ದೇಶಗಳು ಗ್ರೀಸ್ಗಿಂತ ದೊಡ್ಡದಾಗಿದೆ. ಆದ್ದರಿಂದ ಗಾತ್ರ ಮತ್ತು ಪ್ರಮಾಣವು ವಿಭಿನ್ನ ಸ್ವಭಾವವನ್ನು ಹೊಂದಿದೆ. ಪರಿಸ್ಥಿತಿಯು ಕೈಮೀರದಂತೆ ಉಭಯ ರಾಷ್ಟ್ರಗಳ ನಾಯಕರ ಜೊತೆಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಮಧ್ಯೆ ವಿಶ್ವಸಂಸ್ಥೆ ಅಧ್ಯಕ್ಷರು ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಸುದ್ದಿಗಾರರಿಗೆ ತಿಳಿಸಿದರು. ಎರಡೂ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸುವುದನ್ನು ಪರಿಗಣಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡುಜಾರಿಕ್, ಉಭಯ ರಾಷ್ಟ್ರಗಳಿಂದ ಸ್ಪಷ್ಟ ಸಂದೇಶ ಬರುವವರೆಗೆ ಯಾವುದೇ ಪ್ರಯಾಣವಿಲ್ಲ ಎಂದು ಸ್ಪಷ್ಪಪಡಿಸಿದರು.
Advertisement