
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿದ್ದು, ಪಾಕ್ ಸೇನೆ ಸೋಮವಾರ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ಹೇಳಿಕೊಂಡಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಂದು ಇಸ್ಲಾಮಾಬಾದ್ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಈ ವಾರದ ಕೊನೆಯಲ್ಲಿ ದೆಹಲಿಗೆ ತೆರಳುವ ಮೊದಲು ಈ ಕ್ಷಿಪಣಿ ಪರೀಕ್ಷೆ ನಡೆದಿದೆ.
ಇರಾನ್ ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾದ ನಂತರ, ಅರಘ್ಚಿ ಅವರು ಎರಡೂ ದೇಶಗಳಿಗೆ ಭೇಟಿ ನೀಡುತ್ತಿರುವ ಮೊದಲ ಹಿರಿಯ ವಿದೇಶಿ ರಾಜತಾಂತ್ರಿಕ ಆಗಿದ್ದಾರೆ.
"ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುವುದನ್ನು ನಾವು ಬಯಸುವುದಿಲ್ಲ ಮತ್ತು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಲು ನಾವು ಯತ್ನಿಸುತ್ತೇವೆ" ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಹೇಳಿದ್ದಾರೆ.
ಈ ಮಧ್ಯೆ ಪಾಕಿಸ್ತಾನ ಸೇನೆಯು ಇಂದು 120 ಕಿಲೋಮೀಟರ್(75 ಮೈಲುಗಳು) ವ್ಯಾಪ್ತಿಯ ಫತಾಹ್ ಕ್ಷಿಪಣಿಯನ್ನು ಪರೀಕ್ಷಿಸಿದೆ.
ಪಾಕಿಸ್ತಾನದ ಸೇನೆಯು ಈ ಕ್ಷಿಪಣಿಯನ್ನು ಗೌಪ್ಯ ಸ್ಥಳದಿಂದ ಉಡಾಯಿಸಿದೆ. ಫತಾಹ್ ಕ್ಷಿಪಣಿಯು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಶತ್ರು ಗುರಿಗಳನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಪರೀಕ್ಷೆಯು ಪಾಕಿಸ್ತಾನದ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ.
Advertisement