
ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, 48 ಗಂಟೆಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಗ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದ ಭಾರತ ಇದೀಗ ಪಾಕಿಸ್ತಾನ ಸೇನಾ ನೆಲೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತ ವಾಯುದಾಳಿ ಮಾಡಿದೆ.
ಅಲ್ಲದೆ ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದ ನಾಲ್ಕು ಮಹಾನಗರಗಳಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಂ ಅನ್ನು ಕೂಡ ಭಾರತ ನಾಶಪಡಿಸಿದ್ದು, ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹಾಲಿ ಯುದ್ಧ ರೀತಿಯ ಸಂಘರ್ಷದಿಂದಾಗಿ ಪಾಕಿಸ್ತಾನ ಸಾಕಷ್ಟು ನಷ್ಟ ಅನುಭವಿಸಿದ್ದು, ಈ ನಡುವೆ ಪಾಕಿಸ್ತಾನ ಪ್ರಧಾನಿ ಶಹಭಾಶ್ ಷರೀಫ್ ವಿರುದ್ಧ ಅವರದ್ದೇ ದೇಶದ ಸಂಸದ ತಿರುಗಿಬಿದ್ದಿದ್ದಾರೆ.
ಶಹಭಾಶ್ ಷರೀಫ್ 'ರಣಹೇಡಿ'
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತು ಪಾಕಿಸ್ತಾನ ಸಂಸತ್ ಅಧಿವೇಶನದಲ್ಲಿ ಭಾರಿ ಚರ್ಚೆ ನಡೆದಿದ್ದು, ನಿನ್ನೆ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (PTI) ಸಂಸದ ಇಕ್ಬಾಲ್ ತಾಹಿರ್ ಹಾಲಿ ಪಾಕಿಸ್ತಾನ ಸರ್ಕಾರದ ವಿರುದ್ದ ಕಿಡಿಕಾರಿದ್ದರು. ಇದೀಗ ಇಂದು ಮತ್ತೋರ್ವ ಸಂಸದ ಪ್ರಧಾನಿ ಶಹಭಾಷ್ ಷರೀಫ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಯಥಾ ರಾಜ, ತಥಾ ಪ್ರಜಾ'
ಪಾಕಿಸ್ತಾನ ಸಂಸತ್ತಿನಲ್ಲಿ ಶುಕ್ರವಾರ ಚರ್ಚೆಯ ಸಮಯದಲ್ಲಿ ಮಾತನಾಡುತ್ತಿದ್ದ ಅಲ್ಲಿನ ಸಂಸದ ಶಾಹಿದ್ ಅಹ್ಮದ್ (ಎಂಎನ್ಎ) ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು "ಬುಜ್ದಿಲ್" (ಹೇಡಿ) ಎಂದು ಜರಿದಿದ್ದಾರೆ. ಶಹಭಾಷ್ ಷರೀಫ್ ಅವರು ಇಷ್ಟೆಲ್ಲಾ ಆದರೂ ಭಾರತದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಸಹ ಹೇಳಲು ಆಗುತ್ತಿಲ್ಲ. ಅವರನ್ನು ಅದೆಂತಹ ವಿಷಯ ತಡೆಯುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಪಾಕ್ ಸಂಸತ್ ನಲ್ಲಿ 'Tippu Sultan' ಸ್ಮರಣೆ
ಅಂತೆಯೇ ಇದೇ ವೇಳೆ ಸಂಸದ ಶಾಹಿದ್ ಅಹ್ಮದ್ ಟಿಪ್ಪು ಸುಲ್ತಾನ್ ಹೇಳಿಕೆಯನ್ನು ಸ್ಮರಿಸಿದ್ದು, ಓರ್ವ ರಾಜ ಶೂರನಾಗಿದ್ದು ಆತನ ಸೈನಿಕ ದುರ್ಬಲನಾಗಿದ್ದರೂ ಆತ ಸಿಂಹದಂತೆ ಹೋರಾಡುತ್ತಾನೆ. ಆದರೆ ಸೈನಿಕ ಶೂರನಾಗಿದ್ದರೂ ರಾಜ ದುರ್ಬಲನಾಗಿದ್ದರೆ ಆಗ ಆತ ಹೋರಾಡಲು ಹಿಂಜರಿದು ಯುದ್ಧವನ್ನು ಸೋಲುತ್ತಾನೆ. ಇಂತಹುದೇ ಪರಿಸ್ಥಿತಿ ಇದೀಗ ಪಾಕಿಸ್ತಾನಕ್ಕೆ ಬಂದಿದ್ದು ಭಾರತದ ದಾಳಿಯ ನಂತರ ಪಾಕಿಸ್ತಾನ ಸೇನೆ ತುಂಬಾ ನಿರುತ್ಸಾಹಗೊಂಡಿದೆ.
ಗಡಿಯಲ್ಲಿ ನಿಂತು ನಮ್ಮ ಪರವಾಗಿ ಯುದ್ಧ ಮಾಡುತ್ತಿರುವ ನಮ್ಮ ಸೈನಿಕರಿಗೆ ನೈತಿಕ ಧೈರ್ಯ ತುಂಬಬೇಕಿದೆ. ಆದರೆ ಈ ಕೆಲಸವನ್ನು ಪ್ರಧಾನಿ ಶಹಭಾಷ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮಾಡುತ್ತಿಲ್ಲಾ,.. ಅವರೇ ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಓರ್ವ ಪ್ರಧಾನಿಯೇ ನರೇಂದ್ರ ಮೋದಿಯ ಹೆಸರೂ ಕೂಡ ಹೇಳಲಾಗದೇ ಪರದಾಡುತ್ತಿರುವಾಗ ನಮ್ಮ ಸೈನಿಕರು ಹೇಗೆ ಧೈರ್ಯದಿಂದ ಯುದ್ಧ ಮಾಡಲು ಸಾಧ್ಯ ಎಂದು ಸಂಸದ ಶಾಹಿದ್ ಅಹ್ಮದ್ ಪ್ರಶ್ನಿಸಿದ್ದಾರೆ. ಈ ಚರ್ಚೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement