
ನವದೆಹಲಿ: ಇತ್ತೀಚೆಗೆ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ಉಗ್ರ Masood Azhar ಕುಟುಂಬಕ್ಕೆ ಪಾಕಿಸ್ತಾನ ಸರ್ಕಾರ 14 ಕೋಟಿ ರೂ ಪರಿಹಾರ ನೀಡಲು ಮುಂದಾಗಿದೆ.
ಈ ಹಿಂದೆ ಭಾರತದ ಸೇನಾ ದಾಳಿಯಿಂದ ತನ್ನ ಮೂಲಭೂತ ಸೌಕರ್ಯಗಳು ನಾಶವಾಗಿದೆ ಎಂದು ಹೇಳಿ ಅತ್ತೂ ಕರೆದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ನಿಂದ ನೂರಾರು ಬಿಲಿಯನ್ ಡಾಲರ್ ಹಣ ಸಾಲ ಪಡೆದುಕೊಂಡಿದ್ದ ಪಾಕಿಸ್ತಾನ ಇದೀಗ ಆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಟ್ರಿಬ್ಯೂನ್ ಇಂಡಿಯಾದ ವರದಿಯ ಪ್ರಕಾರ, ಪಾಕಿಸ್ತಾನ ಸರ್ಕಾರ ಭಯೋತ್ಪಾದಕ ಮಸೂದ್ ಅಜರ್ಗೆ 14 ಕೋಟಿ ರೂಪಾಯಿ ಪರಿಹಾರ ನೀಡಬಹುದು ಎನ್ನಲಾಗಿದೆ. ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ವೇಳೆ ಮಸೂದ್ ಅಜರ್ ನ ಉಗ್ರ ತರಬೇತಿ ಕೇಂದ್ರದ ಮೇಲೂ ದಾಳಿಯಾಗಿತ್ತು. ಭಾರತವು ಮಸೂದ್ ನ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನ ಬಹಾವಲ್ಪುರ್ ಪ್ರಧಾನ ಕಚೇರಿಯ ಮೇಲೆ ಭಾರತ ವಾಯುದಾಳಿ ನಡೆಸಿತ್ತು.
ಈ ವೇಳೆ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸಾವಿಗೀಡಾಗಿದ್ದರು. ಮೃತರಲ್ಲಿ ತನ್ನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಸೊಸೆ ಮತ್ತು ಕುಟುಂಬದ ಐದು ಮಕ್ಕಳು ಸೇರಿದ್ದಾರೆ.
ಈ ಘಟನೆ ಬಳಿಕ ಉಗ್ರ ಮಸೂದ್ ಅಜರ್ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದು, ತನ್ನ ಉಗ್ರಗಾಮಿಗಳನ್ನು ಮುಂದಿಟ್ಟು ಕೊಂಡು ಯಾವಾಗ ಬೇಕಾದರೂ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಬಹದು.
ಆದರೆ ಇದೇ ಸಂದರ್ಭದಲ್ಲೇ ಪಾಕಿಸ್ತಾನ ಸರ್ಕಾರ ಮಸೂದ್ ಅಜರ್ ಕುಟುಂಬಕ್ಕೆ 14 ಕೋಟಿ ರೂಪಾಯಿ ಪರಿಹಾರ ನೀಡಲು ಮುಂದಾಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮಸೂದ್ ಗೆ ಏಕೆ ಪಾಕ್ ಸರ್ಕಾರದ ಹಣ ನೀಡುತ್ತಿದೆ?
ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ನಲ್ಲಿ ಸಾವಿಗೀಡಾದವರಿಗೆ ಪಾಕಿಸ್ತಾನ ಸರ್ಕಾರ ತಲಾ 1 ಕೋಟಿ ರೂ ಪರಿಹಾರ ಘೋಷಣೆ ಮಾಡಿದೆ. ಅದರಂತೆ ಮಸೂದ್ ಅಜರ್ ಕುಟುಂಬದ 14 ಮಂದಿ ಸಾವನ್ನಪ್ಪಿದ್ದು, ಹೀಗಾಗಿ ತಲಾ 1 ಕೋಟಿ ರೂ ನಂತೆ ಮಸೂದ್ ಅಜರ್ ಕುಟುಂಬಕ್ಕೆ ಒಟ್ಟು 14 ಕೋಟಿ ರೂ ಪರಿಹಾರ ಸಿಗುವ ಸಾಧ್ಯತೆ ಇದೆ.
ಈ ರೀತಿಯಾಗಿ, ಪಾಕಿಸ್ತಾನ ಸರ್ಕಾರವು ಸಹಾಯದ ಹೆಸರಿನಲ್ಲಿ ಬಿಡುಗಡೆ ಮಾಡುವ ಹಣವು ಭಯೋತ್ಪಾದಕರು ಮತ್ತು ಅವರ ಕುಟುಂಬಗಳಿಗೆ ನೇರವಾಗಿ ಸಹಾಯ ಮಾಡುತ್ತದೆ. ಪಾಕಿಸ್ತಾನದ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, 1 ಕೋಟಿ ರೂಪಾಯಿಗಳ ಸಹಾಯವನ್ನು ಘೋಷಿಸಲಾಗಿದೆ. ಸಹಾಯದ ಹೆಸರಿನಲ್ಲಿ ಬಿಡುಗಡೆಯಾದ ಈ ಮೊತ್ತದ ನೇರ ಲಾಭವನ್ನು ಈಗ ಮಸೂದ್ ಅಜರ್ ಮಾತ್ರ ಪಡೆಯಲಿದ್ದಾನೆ.
Advertisement