

ಢಾಕಾ: ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಮತ್ತೊಂದು ಪಾಕಿಸ್ತಾನವಾಗಲಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಮತ್ತು ಹಿರಿಯ ಅವಾಮಿ ಲೀಗ್ ನಾಯಕ ಸಜೀಬ್ ವಾಜೀದ್ ಜಾಯ್ ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಮೇರಿಲ್ಯಾಂಡ್ನಿಂದ ವರ್ಚುವಲ್ ಆಗಿ ನವದೆಹಲಿಯ ವರದಿಗಾಕಕ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂತಾರಾಷ್ಟ್ರೀಯ ಸಮುದಾಯಗಳು ಮಧ್ಯಪ್ರವೇಶ ಮಾಡದೇ ಇದ್ದರೆ ಬಾಂಗ್ಲಾದೇಶವು ಕೂಡ ಭಯೋತ್ಪಾದನೆಯ ತಾಣವಾಗಲಿದೆ ಎಂದಿದ್ದಾರೆ.
ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಂಧಿಸಲ್ಪಟ್ಟಿದ್ದ ನೂರಾರು ಶಿಕ್ಷೆಗೊಳಗಾದ ಭಯೋತ್ಪಾದಕರು ಈಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಿಜ್ಬ್ ಉತ್-ತಹ್ರೀರ್ನಂತಹ ನಿಷೇಧಿತ ಗುಂಪುಗಳು ಬಹಿರಂಗವಾಗಿ ಮೆರವಣಿಗೆ ನಡೆಸುತ್ತಿವೆ. ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸಾರ್ವಜನಿಕ ರಾಲಿಗಳಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಈಗಾಗಲೇ ಪಾಕಿಸ್ತಾನದಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದೆ. ನಿರ್ಲಕ್ಷ್ಯ ವಹಿಸಿದರೆ ಬಾಂಗ್ಲಾದೇಶವು ಭಾರತದ ಪೂರ್ವ ಭಾಗದಲ್ಲಿ ಮತ್ತೊಂದು ಪಾಕಿಸ್ತಾನವಾಗಲಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಆತಂಕಕಾರಿ ವಿಷಯ ಎಂದರು.
ಇದನ್ನು ಈಗಲೇ ನಿಲ್ಲಿಸದೇ ಇದ್ದರೆ ಮುಂದಿನ ಪೀಳಿಗೆ ಜಾಗತಿಕ ಭಯೋತ್ಪಾದನೆಗೆ ಬಲಿಯಾಗಲಿದೆ. ಹೆಚ್ಚಿನ ಭಯೋತ್ಪಾದಕರು ಬಾಂಗ್ಲಾದೇಶದಿಂದ ಬರಲಿದ್ದಾರೆ. ಇದು ಸಾಂದರ್ಭಿಕ ವಿಷಯವಲ್ಲ. ಈ ಕುರಿತು ನಿರಂತರವಾಗಿ ಮಾಧ್ಯಮಗಳಲ್ಲಿ ವರದಿಯಾಗಬೇಕಿದೆ ಎಂದು ತಿಳಿಸಿದರು.
ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಪ್ರತಿಭಟನೆಗಳ ಸಾವಿನ ಸಂಖ್ಯೆಯ ಕುರಿತು ಅವರು ಮಾತನಾಡಿ, ವಿಶ್ವಸಂಸ್ಥೆಯು ಸುಮಾರು 1,400 ಮಂದಿ ಸಾವನ್ನಪ್ಪಿರುವುದಾಗಿ ಹೇಳಿದೆ. ಆದರೆ ಸರ್ಕಾರದ ಅಂಕಿಅಂಶ ಸುಮಾರು 800. ಇದರಲ್ಲಿ 600 ಹೆಚ್ಚಾಗಿರುವುದು ಹೇಗೆ ಎನ್ನುವ ಕುರಿತು ಅವಾಮಿ ಲೀಗ್ ಪ್ರಶ್ನೆಗೆ ವಿಶ್ವಸಂಸ್ಥೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿಸಿದರು.