

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೋರ್ವ ಉಗ್ರಗಾಮಿ ನಿಗೂಢವಾಗಿ ಸಾವನ್ನಪ್ಪಿದ್ದು, ಊಟ ಮಾಡಿ ಹೋದ ಆತ ಮಸೀದಿ ಬಳಿ ಕುಸಿದು ಸಾವನ್ನಪ್ಪಿದ್ದಾನೆ.
ಪಾಕಿಸ್ತಾನದ ಇಸ್ಲಾಮಾಬಾದ್ನ ಮಸೀದಿಯೊಂದರಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ಖಾರಿ ಸಯ್ಯದ್ ಅಬ್ದುಲ್ ಅಜೀಜ್ ನಿಗೂಢವಾಗಿ ಮೃತಪಟ್ಟಿದ್ದಾನೆ. ಪ್ರಾರ್ಥನೆ ಸಲ್ಲಿಸಲು ಕ್ಯೂಬಾ ಮಸೀದಿಗೆ ತೆರಳುವ ಮುನ್ನ ಅಪರಿಚಿತ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ್ದ ಎಂದು ವರದಿಯಾಗಿದೆ.
ಊಟ ಮಾಡಿದ ಬಳಿಕ ಮಸೀದಿಗೆ ತೆರಳಿದ್ದ ಆತ, ಮಸೀದಿಯ ಗೇಟ್ ಬಳಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ಬಳಿಕ ಮೃತಪಟ್ಟಿದ್ದಾನೆ. ಆತನ ಸಾವಿಗೆ ನಿಖರ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಮೃತಪಟ್ಟ ಲಷ್ಕರ್ ಉಗ್ರರ ಕುಟುಂಬಗಳಿಗೆ ನೆರವು ಒದಗಿಸುವ ವಿಭಾಗದ ಜವಾಬ್ದಾರಿಯನ್ನು ಖಾರಿ ಸಯ್ಯದ್ ಅಬ್ದುಲ್ ಅಜೀಜ್ ವಹಿಸಿಕೊಂಡಿದ್ದ ಎಂದು ವರದಿಯಾಗಿದೆ.
30ಕ್ಕೂ ಹೆಚ್ಚು ಉಗ್ರರ ಹತ್ಯೆ?
ಲಷ್ಕರ್ನ ಪ್ರಮುಖ ಕಾರ್ಯಕರ್ತನೊಬ್ಬ ಪಾಕಿಸ್ತಾನದಲ್ಲೇ ಸಂಘಟನೆಯ ಸುಮಾರು 30 ಸದಸ್ಯರನ್ನು ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳ ಬಳಿಕ ಅಬ್ದುಲ್ ಅಜೀಜ್ ಸಾವಿನ ಸುದ್ದಿ ಹೊರಬಿದ್ದಿದೆ.
ರಿಜ್ವಾನ್ ಹನೀಫ್ ಎಂಬಾತ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ ಸಂಘಟನೆಯ ಹಲವು ಸದಸ್ಯರು ಪಾಕಿಸ್ತಾನದ ವಿವಿಧೆಡೆ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.
2008ರ ಮುಂಬೈ ಉಗ್ರ ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಸಂಘಟನೆ ಇತ್ತು. ಆ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. ಪೇಶಾವರ, ಕರಾಚಿ, ರಾವಲ್ಪಿಂಡಿ, ರಾವಲಕೋಟ್ ಮತ್ತು ಮುಜಫರಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಲಷ್ಕರ್-ಎ-ತೊಯ್ಬಾ ಉಗ್ರರನ್ನು ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ರಿಜ್ವಾನ್ ಹನೀಫ್ ಆರೋಪಿಸಿದ್ದಾನೆ.
ಲಷ್ಕರ್ ಉಗ್ರನಿಂದ ಮೊದಲ ಬಾರಿಗೆ ಬಹಿರಂಗ ಹೇಳಿಕೆ
ಅಲ್ಖೈದಾ ಮತ್ತು ತಾಲಿಬಾನ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ 2005ರಲ್ಲಿ ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೆ ಒಳಗಾದ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಇಂತಹ ಹತ್ಯೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರುವುದು ಇದೇ ಮೊದಲ ಬಾರಿ ಎಂದು ವರದಿಯಾಗಿದೆ.
ಇದೀಗ ಲಷ್ಕರ್ನ ಹಿರಿಯ ಕಮಾಂಡರ್ ಅಬ್ದುಲ್ ಅಜೀಜ್ ನಿಗೂಢವಾಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ, ಆತನ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.