

ಮಾಸ್ಕೋ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಮಾತುಕತೆ ನಡೆಸಿದರು.
ಉಭಯ ದೇಶಗಳ ಆರ್ಥಿಕ ಸಹಕಾರದ ಜತೆಗೆ ವ್ಯಾಪಾರ, ಇಂಧನ, ರಸಗೊಬ್ಬರ ಪೂರೈಕೆ ಹಾಗೂ ಪರಮಾಣು ಸಹಕಾರ ಪ್ರಮುಖವಾಗಿ ಚರ್ಚೆಗೆ ಬಂದವು.
ಎರಡು ದಿನಗಳ ರಷ್ಯಾ ಪ್ರವಾಸಕ್ಕಾಗಿ ಭಾನುವಾರ ಮಾಸ್ಕೋಗೆ ತೆರಳಿದ್ದ ಜೈಶಂಕರ್, ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಸೋಮವಾರವೇ ನಡೆದ ಅಂತರ್-ಸರ್ಕಾರಿ ಆಯೋಗದ ಸಭೆಯಲ್ಲಿ ಆರ್ಥಿಕ ಸಹಕಾರದ ಕುರಿತು ಚರ್ಚೆ ನಡೆದಿದ್ದು, ಸಭೆಯಲ್ಲಿ ಉತ್ತಮ ಬೆಳವಣಿಗೆಗಳ ಬಗ್ಗೆ ವರದಿ ಸಿಕ್ಕಿದೆ ಎಂದು ಜೈಶಂಕರ್ ತಿಳಿಸಿದರು.
“ನಮ್ಮ ಆರ್ಥಿಕ ಸಹಕಾರ, ವ್ಯಾಪಾರ, ಇಂಧನ, ರಸಗೊಬ್ಬರ, ಪರಮಾಣು ಸಹಕಾರ ಸೇರಿದಂತೆ ಹಲವು ಆಯಾಮಗಳ ಕುರಿತು ವಿವರವಾಗಿ ಮಾತನಾಡಲು ನನಗೆ ಸಂತೋಷವಾಗುತ್ತದೆ. ಒಟ್ಟಾರೆಯಾಗಿ, ನಮ್ಮ ಆರ್ಥಿಕ ಸಹಕಾರ ಬಹಳ ಗಮನಾರ್ಹವಾಗಿ ವೃದ್ಧಿಯಾಗಿದೆ,” ಎಂದು ಜೈಶಂಕರ್ ಹೇಳಿದರು.
ಭಾರತಕ್ಕೆ ರಸಗೊಬ್ಬರ ಪೂರೈಕೆ ಹೆಚ್ಚಿಸಲಿರುವ ರಷ್ಯಾ
ಭಾರತಕ್ಕೆ ರಸಗೊಬ್ಬರ ಪೂರೈಕೆಯನ್ನು ರಷ್ಯಾ ಹೆಚ್ಚಿಸುತ್ತಿದ್ದು, ಮುಂದೆಯೂ ಅದನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ (TASS) ಈ ಮಾಹಿತಿಯನ್ನು ವರದಿ ಮಾಡಿದೆ.
ರಸಗೊಬ್ಬರ ಪೂರೈಕೆ ಕೃಷಿ ಕ್ಷೇತ್ರಕ್ಕೆ ಅತ್ಯಂತ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ರಷ್ಯಾದ ಈ ಭರವಸೆ ಭಾರತಕ್ಕೆ ಮಹತ್ವದ್ದಾಗಿದೆ.
ಜೈಶಂಕರ್-ಪುಟಿನ್ ಭೇಟಿ ಮೂಲಕ ಭಾರತ-ರಷ್ಯಾ ನಡುವಿನ ಸಾಂಪ್ರದಾಯಿಕ ಸ್ನೇಹ ಸಂಬಂಧಕ್ಕೆ ಆರ್ಥಿಕ ಸಹಕಾರದ ಹೊಸ ಆಯಾಮ ಸೇರ್ಪಡೆಯಾಗುವ ನಿರೀಕ್ಷೆ ಮೂಡಿದೆ.