ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 392ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

ಆರಂಭದಲ್ಲಿ ಈ ಘಟನೆ 4.4 ತೀವ್ರತೆಯ ಭೂಕಂಪದಿಂದ ಸಂಭವಿಸಿದೆ ಎಂದು ವರದಿಯಾಗಿತ್ತು. ಆದರೆ, ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ಪರಿಷ್ಕೃತ ವಿಶ್ಲೇಷಣೆ, ಇದು ಭೂಕಂಪದಿಂದ ಸಂಭವಿಸಿದ್ದಲ್ಲ, ಹಿಮನದಿ ಕುಸಿತ ಮತ್ತು ಅದರೊಂದಿಗೆ ಉಂಟಾದ ಅವಶೇಷ ಪ್ರವಾಹವೇ ದುರಂತಕ್ಕೆ ಕಾರಣ ಎಂದು ತಿಳಿಸಿದೆ.
Damaged houses stand precariously near the swollen, debris-choked banks of the Trishuli River after flash floods in Nepal's Nuwakot district
ನೇಪಾಳದ ನುವಾಕೋಟ್ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ಬಳಿಕ, ಉಕ್ಕಿ ಹರಿಯುತ್ತಿರುವ ಹಾಗೂ ಅವಶೇಷಗಳಿಂದ ತುಂಬಿರುವ ತ್ರಿಶೂಲಿ ನದಿಯ ದಡದ ಬಳಿ ಹಾನಿಗೊಳಗಾದ ಮನೆಗಳು ಅಪಾಯಕಾರಿಯಾಗಿ ನಿಂತಿರುವ ದೃಶ್ಯ.
Updated on

ಕಠ್ಮಂಡು: ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಗುರುವಾರ 392ಕ್ಕೆ ಏರಿಕೆಯಾಗಿದೆ. ಇನ್ನೂ 1,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 290 ಮಂದಿ ಭಾರತೀಯರು ಎಂದು ವರದಿಯಾಗಿದೆ.

ರಕ್ಷಣಾ ತಂಡಗಳು ಕೆಸರು ಹಾಗೂ ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಇದೇ ವೇಳೆ ಮತ್ತೊಂದು ಪ್ರವಾಹದ ಆತಂಕವೂ ಎದುರಾಗಿದೆ. ಮೃತಪಟ್ಟ 392 ಮಂದಿಯಲ್ಲಿ 389 ಮಂದಿ ನೇಪಾಳದಲ್ಲಿ ಹಾಗೂ ಮೂವರು ನೆರೆಯ ಟಿಬೆಟ್‌ನಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ನೇಪಾಳ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಹೆಲಿಕಾಪ್ಟರ್‌ಗಳ ಮೂಲಕ 50 ವಿದೇಶಿಯರು ಸೇರಿದಂತೆ 796 ಮಂದಿಯನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲಾಗಿದೆ. ಮತ್ತೂ 796 ಮಂದಿಯನ್ನು ಭೂಮಾರ್ಗದ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ, ರಕ್ಷಿಸಲಾದ ವಿದೇಶಿಯರ ರಾಷ್ಟ್ರೀಯತೆಗಳ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ನೇಪಾಳ-ಟಿಬೆಟ್ ಗಡಿ ಸಮೀಪ ಹಿಮನದಿ ಕುಸಿತದಿಂದ ಸಂಭವಿಸಿದ ಹಿಮ-ಬಂಡೆಗಳ ಭಾರೀ ಕುಸಿತವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಸಂಭವಿಸಿದ ಈ ಘಟನೆಯ ಬಳಿಕ ಅಪಾರ ಪ್ರಮಾಣದ ನೀರು, ಕೆಸರು ಮತ್ತು ಅವಶೇಷಗಳು ಮಧ್ಯ ನೇಪಾಳದತ್ತ ಹರಿದು ಪಟ್ಟಣಗಳು ಹಾಗೂ ಗ್ರಾಮಗಳನ್ನು ನಾಶಪಡಿಸಿವೆ. ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದೆ.

ಮತ್ತೊಂದು ಪ್ರವಾಹದ ಆತಂಕ

ಈ ನಡುವೆ ಭೋಟೆ ಕೋಶಿ ನದಿ ವ್ಯವಸ್ಥೆಯ ಮೂಲ ಪ್ರದೇಶದ ಸಮೀಪ ಹೊಸದೊಂದು ತಡೆ ಸರೋವರ ನಿರ್ಮಾಣವಾಗಿರುವುದರಿಂದ ಕೆಳಭಾಗದಲ್ಲಿ ಮತ್ತೊಂದು ಪ್ರವಾಹದ ಅಪಾಯ ಎದುರಾಗಿದೆ.

ಈ ನೈಸರ್ಗಿಕ ತಡೆ ಒಡೆದರೆ ನದಿಯಲ್ಲಿ ಮತ್ತೊಂದು ಭಾರೀ ನೀರಿನ ಅಲೆ ಉಂಟಾಗಿ ಕೆಳಭಾಗದ ಪ್ರದೇಶಗಳಿಗೆ ಅಪಾಯ ಎದುರಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಭಾರೀ ಪ್ರಮಾಣದ ಅವಶೇಷಗಳು ಕಣಿವೆಯಲ್ಲಿನ ನೀರಿನ ಹರಿವಿಗೆ ತಡೆಯೊಡ್ಡಿರುವುದರಿಂದ ಮತ್ತೊಂದು ಪ್ರವಾಹ ಉಂಟಾಗುವ ಆತಂಕ ಮುಂದುವರಿದಿದೆ.

ಕಠ್ಮಂಡುವಿನಲ್ಲಿರುವ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್‌ನ ಹವಾಮಾನ ಮತ್ತು ಪರಿಸರ ಅಪಾಯ ವಿಭಾಗದ ಮುಖ್ಯಸ್ಥ ಕಿಯಾಂಗ್‌ಗಾಂಗ್ ಝಾಂಗ್, ನೇಪಾಳ-ಚೀನಾ ಗಡಿ ಭಾಗದ ನದಿಯಲ್ಲಿ ಇನ್ನೂ ತಡೆ ಉಂಟಾಗಿರುವುದರಿಂದ ಎರಡನೇ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ನೇಪಾಳದ ಪ್ರವಾಹ ಮುನ್ಸೂಚನಾ ವಿಭಾಗವು ಗುರುವಾರ ವಿಶೇಷ ಸೂಚನೆ ಹೊರಡಿಸಿ, ಭೂಕುಸಿತದಿಂದ ಉಂಟಾದ ಅವಶೇಷಗಳ ಹಿಂದೆ ನೀರು ಸಂಗ್ರಹವಾಗಿ ಸರೋವರದ ಗಾತ್ರ ಹೆಚ್ಚುತ್ತಿರುವುದಾಗಿ ತಿಳಿಸಿದೆ. ಜನರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Damaged houses stand precariously near the swollen, debris-choked banks of the Trishuli River after flash floods in Nepal's Nuwakot district
Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

1,468 ಮಂದಿ ನಾಪತ್ತೆ

ನೇಪಾಳದ ಅಧಿಕಾರಿಗಳ ಪ್ರಕಾರ 910 ಮಂದಿ ನಾಪತ್ತೆಯಾಗಿದ್ದಾರೆ. ಕೆಸರು ಮತ್ತು ಅವಶೇಷಗಳಿಂದ ತುಂಬಿರುವ ನದಿ ಮಾರ್ಗಗಳಲ್ಲಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ಮತ್ತೊಂದೆಡೆ, ಕುಟುಂಬಸ್ಥರು ತಮ್ಮವರಿಗಾಗಿ ಆಸ್ಪತ್ರೆಗಳಲ್ಲಿ ಆತಂಕದಿಂದ ಹುಡುಕಾಟ ನಡೆಸುತ್ತಿದ್ದಾರೆ.

ಟಿಬೆಟ್‌ನಲ್ಲಿ 558 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ನೇಪಾಳ ಮತ್ತು ಟಿಬೆಟ್ ಎರಡೂ ಕಡೆಗಳಲ್ಲಿ ಒಟ್ಟು 1,468 ಮಂದಿ ನಾಪತ್ತೆಯಾಗಿದ್ದಾರೆ.

ಸಂಪರ್ಕಕ್ಕೆ ಸಿಗದ 290 ಭಾರತೀಯರು

ಈ ದುರಂತದ ಬಳಿಕ ಭಾರತೀಯರನ್ನು ಪತ್ತೆಹಚ್ಚಲು ಭಾರತ ಸರ್ಕಾರವೂ ತುರ್ತು ಕ್ರಮ ಕೈಗೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, 290 ಭಾರತೀಯರು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ.

ಅವರ ಇರುವಿಕೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಅವರನ್ನು ರಕ್ಷಿಸಲು ತುರ್ತು ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ಈವರೆಗೆ 84 ಭಾರತೀಯರನ್ನು ರಕ್ಷಿಸಲಾಗಿದೆ. ಇವರಲ್ಲಿ ನಿರ್ಮಾಣ ಹಂತದಲ್ಲಿರುವ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 63 ಕಾರ್ಮಿಕರು ಹಾಗೂ ತಮಿಳುನಾಡಿನ 21 ಮಂದಿ ಸೇರಿದ್ದಾರೆ.

ಟಿಬೆಟ್ ಭಾಗದಲ್ಲಿರುವ ಸುಮಾರು 200 ಭಾರತೀಯರು ಸುರಕ್ಷಿತ ಸ್ಥಳಾಂತರಕ್ಕಾಗಿ ನೆರವು ಕೋರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೇಪಾಳ ಸರ್ಕಾರ, ವಿವಿಧ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಪ್ರವಾಸ ಆಯೋಜಕರು ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನೇಪಾಳಕ್ಕೆ ಭಾರತದ ನೆರವು

ಏತನ್ಮಧ್ಯೆ ಭಾರತವು ನೇಪಾಳಕ್ಕೆ ಪರಿಹಾರ ಸಾಮಗ್ರಿಗಳ ನೆರವನ್ನು ಮತ್ತಷ್ಟು ಹೆಚ್ಚಿಸಿದೆ. ಬುಧವಾರ 10 ಟನ್‌ಗಳಷ್ಟು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದ ಭಾರತ, ಗುರುವಾರ ಮತ್ತೊಂದು 37.5 ಟನ್‌ಗಳಷ್ಟು ಸಾಮಗ್ರಿಗಳನ್ನು ಸೇನಾ ಸಾರಿಗೆ ವಿಮಾನದ ಮೂಲಕ ಕಳುಹಿಸಿದೆ.

ಔಷಧಗಳು, ಆಹಾರ ಪ್ಯಾಕೆಟ್‌ಗಳು ಸೇರಿದಂತೆ ಒಟ್ಟು 47.5 ಟನ್‌ಗಳಷ್ಟು ಮಾನವೀಯ ನೆರವು ಇದುವರೆಗೆ ನೇಪಾಳಕ್ಕೆ ರವಾನೆಯಾಗಿದೆ.

Damaged houses stand precariously near the swollen, debris-choked banks of the Trishuli River after flash floods in Nepal's Nuwakot district
Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

50 ಲಕ್ಷ ಘನ ಮೀಟರ್ ನೀರು ಸೇರುವ ಆತಂಕ

ಚೀನಾದ ಅಧಿಕಾರಿಗಳ ಅಂದಾಜಿನ ಪ್ರಕಾರ, ಗುರುವಾರ ಬೆಳಗ್ಗೆಯ ವೇಳೆಗೆ ಹೊಸದಾಗಿ ನಿರ್ಮಾಣವಾದ ತಡೆ ಸರೋವರದಲ್ಲಿ ಸುಮಾರು 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿತ್ತು. ಮುಂದಿನ ಮೂರು ದಿನಗಳಲ್ಲಿ ಮತ್ತೂ 30 ಲಕ್ಷ ಘನ ಮೀಟರ್ ನೀರು ಸರೋವರಕ್ಕೆ ಹರಿದುಬರುವ ಸಾಧ್ಯತೆಯಿದೆ. ಇದರಿಂದ ನೈಸರ್ಗಿಕ ತಡೆ ಒಡೆಯುವ ಆತಂಕ ಹೆಚ್ಚಾಗಿದೆ.

ಟಿಬೆಟ್‌ನಿಂದ ಹುಟ್ಟಿ ನೇಪಾಳದತ್ತ ಹರಿಯುವ ಛೋಚೆನ್ ಖೋಲಾ ಮತ್ತು ಪುರೇಪು ತ್ಸಾಂಗ್ಪೊ ನದಿಗಳು ಸೇರುವ ಪ್ರದೇಶದ ಸಮೀಪ ಈ ಸರೋವರ ನಿರ್ಮಾಣವಾಗಿದೆ. ಇವು ಮುಂದೆ ಭೋಟೆ ಕೋಶಿ ನದಿ ವ್ಯವಸ್ಥೆಯ ಭಾಗವಾಗುತ್ತವೆ.

ಚೀನಾದ ಅಧಿಕಾರಿಗಳಿಂದ ಸರೋವರ ನಿರ್ಮಾಣದ ಮಾಹಿತಿ ಪಡೆದಿರುವುದಾಗಿ ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ ತಿಳಿಸಿದೆ. ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿ ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಮುಂದುವರಿದಿರುವುದಾಗಿ ಎಚ್ಚರಿಸಿದೆ.

ಜನರು ನದಿ ದಡಗಳಿಂದ ದೂರವಿದ್ದು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ. ಪ್ರಯಾಣಿಕರು, ಭದ್ರತಾ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಕೂಡ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಚೀನಾದ ಅಧಿಕಾರಿಗಳು ಸರೋವರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರವಾಹದ ಮಾದರಿ ವಿಶ್ಲೇಷಣೆ ಮತ್ತು ಅಪಾಯದ ಮೌಲ್ಯಮಾಪನ ನಡೆಸುತ್ತಿದ್ದಾರೆ. ಸಂಪರ್ಕ ಮತ್ತು ಪತ್ತೆ ಸಾಧನಗಳೊಂದಿಗೆ ಚೀನಾದ ರಕ್ಷಣಾ ತಂಡವೊಂದು ಗ್ಯಿರಾಂಗ್ ತಲುಪಿ ಮೇಲ್ಭಾಗದಲ್ಲಿರುವ ತಡೆ ಪ್ರದೇಶವನ್ನು ಪರಿಶೀಲಿಸುತ್ತಿದೆ.

ಚೀನಾ ಸರ್ಕಾರವು ಟಿಬೆಟ್‌ನಲ್ಲಿ ಸುಮಾರು 800 ತುರ್ತು ಸಿಬ್ಬಂದಿಯನ್ನು ನಿಯೋಜಿಸಿದ್ದು, ಶ್ವಾನದಳ ಮತ್ತು ವೇಗದ ದೋಣಿಗಳನ್ನೂ ರಕ್ಷಣಾ ಕಾರ್ಯಾಚರಣೆಗೆ ಬಳಸುತ್ತಿದೆ.

ಭೂಕಂಪವಲ್ಲ, ಹಿಮನದಿ ಕುಸಿತವೇ ಕಾರಣ

ಆರಂಭದಲ್ಲಿ ಈ ಘಟನೆ 4.4 ತೀವ್ರತೆಯ ಭೂಕಂಪದಿಂದ ಸಂಭವಿಸಿದೆ ಎಂದು ವರದಿಯಾಗಿತ್ತು. ಆದರೆ, ನೇಪಾಳದ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆ ಹಾಗೂ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ಪರಿಷ್ಕೃತ ವಿಶ್ಲೇಷಣೆ, ಇದು ಭೂಕಂಪದಿಂದ ಸಂಭವಿಸಿದ್ದಲ್ಲ, ಹಿಮನದಿ ಕುಸಿತ ಮತ್ತು ಅದರೊಂದಿಗೆ ಉಂಟಾದ ಅವಶೇಷ ಪ್ರವಾಹವೇ ದುರಂತಕ್ಕೆ ಕಾರಣ ಎಂದು ತಿಳಿಸಿದೆ.

ನೇಪಾಳ-ಚೀನಾ ಗಡಿಯ ಸಮೀಪ ರಸುವಾಗಢಿ ಗಡಿ ಪಟ್ಟಣದಿಂದ ಸುಮಾರು 20 ಕಿ.ಮೀ. ಈಶಾನ್ಯದಲ್ಲಿರುವ ಪ್ರದೇಶದಲ್ಲಿ ಹಿಮ-ಬಂಡೆಗಳ ಭಾರೀ ಕುಸಿತ ಸಂಭವಿಸಿದೆ. ಇದರಿಂದ ಲ್ಹೆಂಡೆ ನದಿಯ ಹರಿವು ತಾತ್ಕಾಲಿಕವಾಗಿ ತಡೆಯಲ್ಪಟ್ಟು, ಬಳಿಕ ನೈಸರ್ಗಿಕ ತಡೆ ಒಡೆದಾಗ ಭಾರೀ ಪ್ರಮಾಣದ ನೀರು ಮತ್ತು ಅವಶೇಷಗಳು ಕೆಳಕ್ಕೆ ನುಗ್ಗಿವೆ.

ಈ ಪ್ರವಾಹ ಟಿಮುರೆ ಮೂಲಕ ಹರಿದು ತ್ರಿಶೂಲಿ ನದಿಯನ್ನು ಸೇರಿದೆ ಎಂದು ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ರಸ್ತೆ, ಸೇತುವೆ, ಜಲವಿದ್ಯುತ್ ಯೋಜನೆಗಳಿಗೆ ಭಾರೀ ಹಾನಿ

ಪ್ರವಾಹದಿಂದ ರಸುವಾ ಜಿಲ್ಲೆಯಲ್ಲಿ ಮೊದಲು ಭಾರೀ ಹಾನಿ ಸಂಭವಿಸಿದ್ದು, ರಾಜಧಾನಿ ಕಠ್ಮಂಡುವಿನಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಪ್ರದೇಶಗಳಿಗೂ ಪ್ರವಾಹ ಅಪ್ಪಳಿಸಿದೆ.

ಟಿಮುರೆ ಮತ್ತು ರಸುವಾಗಢಿ ಸೇರಿದಂತೆ ಹಲವು ವಸತಿ ಪ್ರದೇಶಗಳ ಮೇಲೆ ನೀರು, ಕೆಸರು, ಬಂಡೆಗಳು ಮತ್ತು ಅವಶೇಷಗಳು ನುಗ್ಗಿವೆ. ಬಳಿಕ ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿ ವ್ಯವಸ್ಥೆಯ ಮೂಲಕ ಕೆಳಭಾಗಕ್ಕೂ ಪ್ರವಾಹ ಹರಿದಿದೆ.

ನೇಪಾಳದ ರಸ್ತೆ ಇಲಾಖೆ ಪ್ರಕಾರ, ಬೆಟ್ರಾವತಿ ಮತ್ತು ರಸುವಾಗಢಿ ನಡುವಿನ 42 ಕಿ.ಮೀ. ರಸ್ತೆ ಮಾರ್ಗದ ಹಲವು ಭಾಗಗಳು ಹಾನಿಗೊಳಗಾಗಿವೆ. ಹಲವು ಕಾಂಕ್ರೀಟ್ ಸೇತುವೆಗಳು ಕೊಚ್ಚಿಹೋಗಿವೆ.

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, 35 ವಾಹನ ಸಂಚಾರಕ್ಕೆ ಯೋಗ್ಯವಾದ ಸೇತುವೆಗಳು, 45 ತೂಗು ಸೇತುವೆಗಳು ಹಾಗೂ ಸುಮಾರು 40 ಕಿ.ಮೀ. ಡಾಂಬರು ರಸ್ತೆಗಳು ಹಾನಿಗೊಳಗಾಗಿವೆ. ಇದರಿಂದ ಪ್ರವಾಹ ಪೀಡಿತ ಜಿಲ್ಲೆಗಳ ನಡುವಿನ ಸಂಚಾರ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

ತ್ರಿಶೂಲಿ ಮತ್ತು ದೇವಿಘಾಟ್ ಜಲವಿದ್ಯುತ್ ಯೋಜನೆಗಳಿಗೂ, ಇತರ ವಿದ್ಯುತ್ ಮೂಲಸೌಕರ್ಯಗಳಿಗೂ ಹಾನಿಯಾಗಿದೆ.

ಮುಂದುವರೆದ ರಕ್ಷಣಾ ಕಾರ್ಯಾಚರಣೆ

ನೇಪಾಳದ ಭದ್ರತಾ ಸಿಬ್ಬಂದಿ ಇದುವರೆಗೆ 800ಕ್ಕೂ ಹೆಚ್ಚು ಮಂದಿಯನ್ನು ಪ್ರವಾಹ ಪೀಡಿತ ಜಿಲ್ಲೆಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಭೂಮಾರ್ಗದ ರಕ್ಷಣಾ ತಂಡಗಳು ಪ್ರತ್ಯೇಕಗೊಂಡಿರುವ ವಸತಿ ಪ್ರದೇಶಗಳು, ನದಿ ದಡಗಳು ಹಾಗೂ ಕೆಳಭಾಗದ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿಸಿವೆ.

ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಗುರುವಾರ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳಾಂತರಗೊಂಡ ಕುಟುಂಬಗಳಿಗೆ ತಕ್ಷಣದ ಪರಿಹಾರ ಒದಗಿಸುವಂತೆ ಹಾಗೂ ಬಂದ್ ಆಗಿರುವ ರಸ್ತೆಗಳನ್ನು ತೆರವುಗೊಳಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ ಚೀನಾದ ಪ್ರಧಾನಿ ಲಿ ಕಿಯಾಂಗ್ ಪ್ರವಾಹ ಪೀಡಿತ ಗ್ಯಿರಾಂಗ್ ಪಟ್ಟಣಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮ ಥಿಯೇಟರ್ ಕಮಾಂಡ್ ಕೂಡ ಸೇನಾ ರಕ್ಷಣಾ ಕಾರ್ಯಾಚರಣೆಗಳ ಸಮನ್ವಯಕ್ಕಾಗಿ ತಂಡವೊಂದನ್ನು ಕಳುಹಿಸಿದೆ.

ಪ್ರವಾಹದ ಬಳಿಕದ ದೃಶ್ಯಗಳು ದುರಂತದ ಭೀಕರತೆಯನ್ನು ತೋರಿಸುತ್ತಿದ್ದು, ಹಲವು ಕಟ್ಟಡಗಳು ಕೊಚ್ಚಿಹೋಗಿವೆ. ಕೆಲವು ಕಟ್ಟಡಗಳು ದಟ್ಟವಾದ ಕೆಸರು ಮತ್ತು ಅವಶೇಷಗಳ ನಡುವೆ ಮಾತ್ರ ಕಾಣಿಸುತ್ತಿವೆ. ವಾಹನಗಳು ಕೆಸರಿನಲ್ಲಿ ಹೂತುಹೋಗಿದ್ದು, ರಸ್ತೆಗಳು ತುಂಡಾಗಿವೆ ಮತ್ತು ಸೇತುವೆಗಳು ಕೊಚ್ಚಿಹೋಗಿವೆ.

ರಸುವಾ ಮತ್ತು ನುವಾಕೋಟ್ ಜಿಲ್ಲೆಗಳ ನದಿ ದಡದ ಹಲವು ವಸತಿ ಪ್ರದೇಶಗಳು ಕೆಸರು, ಬಂಡೆಗಳು ಮತ್ತು ಅವಶೇಷಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿವೆ. ಅಧಿಕಾರಿಗಳು ದುರಂತದಿಂದ ಉಂಟಾದ ಒಟ್ಟು ಹಾನಿಯ ಪ್ರಮಾಣವನ್ನು ಇನ್ನೂ ಅಂದಾಜಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com