

ಕಠ್ಮಂಡು: ನೇಪಾಳದಲ್ಲಿ ಬುಧವಾರ ಸಂಭವಿಸಿದ ವಿನಾಶಕಾರಿ ದಿಢೀರ್ ಪ್ರವಾಹದಿಂದ ಸಾವನ್ನಪ್ಪಿದ್ದರು ದಿನ ದಿನವೂ ಹೆಚ್ಚಾಗುತ್ತಿರುವಂತೆಯೇ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಭರದಿಂದ ಸಾಗಿದೆ. ಭೀಕರ ಪ್ರವಾಹ ಉಂಟಾಗಿ ಮೂರು ದಿನಗಳ ನಂತರ ರಕ್ಷಣಾ ಸಿಬ್ಬಂದಿ ದಟ್ಟವಾದ ಮಣ್ಣು ಮತ್ತು ಅವಶೇಷಗಳಡಿ ಆರು ವರ್ಷದ ಬಾಲಕಿಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ಬದುಕುಳಿದವರನ್ನು ಪತ್ತೆಹಚ್ಚಲು ವಿಪತ್ತು ನಿರ್ವಹಣಾ ತಂಡಗಳು ದಣಿವರಿಯಿಲ್ಲದೆ ಕಾರ್ಯ ನಿರ್ವಹಿಸುವಾಗ ರಾಸುವಾ ಜಿಲ್ಲೆಯ ತಿಮುರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಅಧಿಕಾರಿಗಳು ಬದುಕುಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ ಮಣ್ಣಿನ ಕೆಳಗೆ ಕೂಗು ಕೇಳಿಬಂದಿದೆ. ಕೂಡಲೇ ಅವರು ತ್ವರಿತವಾಗಿ ಕಾರ್ಯನಿರ್ವಹಿಸಿ ಅಗೆಯಲು ಪ್ರಾರಂಭಿಸಿದ್ದಾಗ ಆರು ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ.
ನಂತರ ಆಕೆಯನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆಕೆಗೆ ತಿಮುರೆಯಲ್ಲಿರುವ ಎಪಿಎಫ್ ಗಡಿ ಹೊರಠಾಣೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಆಕೆಯ ಸ್ಥಿತಿ ಹದಗೆಟ್ಟು, ಉತ್ತಮ ವೈದ್ಯಕೀಯ ಸೌಲಭ್ಯದಲ್ಲಿ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿತ್ತು. ಹಾಗಾಗೀ ಆಕೆಯನ್ನು ಅಧಿಕಾರಿಗಳು ವಿಮಾನದಲ್ಲಿ ಕಠ್ಮಂಡುವಿಗೆ ಸಾಗಿಸಿದ್ದಾರೆ.
ಈಗ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ನಿಗಾವಣೆಯಲ್ಲಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಕ್ಷಣಾ ಸಿಬ್ಬಂದಿಗಳ ಪ್ರಯತ್ನವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ನೇಪಾಳದಲ್ಲಿ ಇಲ್ಲಿಯವರೆಗೂ 675 ಮೃತದೇಹಗಳನ್ನು ರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಇನ್ನೂ 2,400 ಜನರು ನಾಪತ್ತೆಯಾಗಿದ್ದಾರೆ.