

ಕೊಲಂಬೊ: ಶ್ರೀಲಂಕಾದ ವ್ಯಾಪ್ತಿಯ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಶ್ರೀಲಂಕಾದ ನೌಕಪಡೆಯು 25 ಭಾರತೀಯ ಮೀನುಗಾರರನ್ನು ಸೋಮವಾರ ಬಂಧಿಸಿದೆ.
ಶ್ರೀಲಂಕಾದ ಜಾಫ್ನಾ ಪ್ರದೇಶದಲ್ಲಿರುವ ಕಂಕಸಂತುರೈ ಸಮುದ್ರದಲ್ಲಿ ಮೀನುಗಾರರನ್ನು ಬಂಧಿಸಿದ್ದು, ಅವರ ಎರಡು ಹಾಯಿ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ ಕಾನೂನು ಕ್ರಮಗಳಿಗಾಗಿ ಜಾಫ್ನಾದ ಮೈಲಿಡ್ಡಿಯ ಮೀನುಗಾರಿಕಾ ನಿರೀಕ್ಷಕರಿಗೆ ಬಂಧಿತರನ್ನು ಹಸ್ತಾಂತರಿಸಲಾಗುವುದು.
ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಕೆಲವೊಮ್ಮೆ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸುವುದು ಮತ್ತು ಶ್ರೀಲಂಕಾ ವ್ಯಾಪ್ತಿಯ ಸಮುದ್ರ ಪ್ರವೇಶಿಸಿದ್ದಕ್ಕೆ ದೋಣಿಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧದಲ್ಲಿ ಮೀನುಗಾರರ ಸಮಸ್ಯೆಯು ವಿವಾದಕ್ಕೆ ಕಾರಣವಾಗಿದೆ.
ಉಭಯ ದೇಶಗಳ ಮೀನುಗಾರರು ಅಜಾಗರೂಕತೆಯಿಂದ ಪರಸ್ಪರರ ನೀರಿನೊಳಗೆ ಅತಿಕ್ರಮಣ ಮಾಡಿದ ಕಾರಣಕ್ಕಾಗಿ ಆಗಾಗ್ಗೆ ಬಂಧಿಸಲ್ಪಡುತ್ತಾರೆ. ಪಾಕ್ ಜಲಸಂಧಿಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ಸಮುದ್ರದ ಮಾರ್ಗವಾಗಿದೆ. ಎರಡೂ ದೇಶಗಳ ಮೀನುಗಾರರಿಗೆ ಶ್ರೀಮಂತ ಮೀನುಗಾರಿಕೆ ಸ್ಥಳವಾಗಿದೆ.
2025 ರಲ್ಲಿ ಮೀನುಗಾರಿಕೆ ಆರೋಪದ ಮೇಲೆ 346 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, 44 ಹಾಯಿದೋಣಿಗಳನ್ನು ವಶಪಡಿಸಿಕೊಂಡಿರುವುದಾಗಿ ಶ್ರೀಲಂಕಾದ ನೌಕಪಡೆ ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತು.
Advertisement