

ಟೆಹ್ರಾನ್: ಇರಾನ್ ನ ಪರಮೋಚ್ಛ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿದಾಯ ಸಮಾರಂಭದಲ್ಲಿ ಭಾಗವಹಿಸಿದ್ದ ಇರಾನ್ ನ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತಿತರ ಧಾರ್ಮಿಕ ಮುಖಂಡರು ಕಣ್ಣೀರಿಟಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಮೊದಲ ದಿನವಾದ ಫೆಬ್ರವರಿ 28 ರಂದು ನಡೆದ ದಾಳಿಯಲ್ಲಿ ಅಲಿ ಖಮೇನಿ ಅವರ ಹತ್ಯೆಯಾಗಿತ್ತು. ಅವರಿಗೆ 86 ವರ್ಷವಾಗಿತ್ತು. ಈ ದಾಳಿಯಲ್ಲಿ ಖಮೇನಿ ಅವರ ಹಿರಿಯ ಮಗಳು, ಅಳಿಯ, 14 ತಿಂಗಳ ಮೊಮ್ಮಗಳು, ಇರಾನ್ ನ ಈಗಿನ ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಅವರ ಪತ್ನಿ ಮೃತಪಟ್ಟಿದ್ದರು.
ಹುತಾತ್ಮ ನಾಯಕನ ಅಂತಿಮ ವಿದಾಯದ ಸಂದರ್ಭದಲ್ಲಿ ಉನ್ನತ ಮಟ್ಟದ ಭದ್ರತೆ ಮತ್ತು ಸುರಕ್ಷತೆಯನ್ನು ಕಲ್ಪಿಸಿದ್ದೇವೆ ಎಂದು ಟೆಹರಾನ್ ಗವರ್ನರ್ ಮೊಹಮ್ಮದ್ ಸಾದೆಗ್ ಮೊತಮದಿಯನ್ ಹೇಳಿದ್ದಾರೆ.
ಇಂದು ಮುಂಜಾನೆ ಟೆಹರಾನ್ ನ ಪ್ರಾರ್ಥನಾ ಮೈದಾನದ ಬಾಗಿಲುಗಳು ತೆರೆಯಲಿವೆ. ಬೆಳಗ್ಗೆ 6ಕ್ಕೆ ಮುಂಚಿತವಾಗಿ ಯಾವುದೇ ಪ್ರವೇಶ ಇರುವುದಿಲ್ಲ. ಸಾರ್ವಜನಿಕರು ನಿಗದಿತ ಸಮಯದೊಳಗೆ ಮೈದಾನಕ್ಕೆ ಬರಲು ಯೋಜಿಸಬೇಕು ಎಂದು ಅವರು ತಿಳಿಸಿದ್ದಾರೆ. ಇಸ್ಲಾಮಿಕ್ ಕ್ರಾಂತಿಯ ನಾಯಕನ ಅಂತ್ಯಕ್ರಿಯೆಯ ಮೆರವಣಿಗೆಗಾಗಿ ಬಾಗ್ದಾದ್ ನಗರವನ್ನು ಮುಚ್ಚಲ್ಪಡುತ್ತದೆ ಎಂದು ಫಾರ್ಸ್ ನ್ಯೂಸ್ ವರದಿ ಮಾಡಿದೆ.
ಭಾರತದ ನಿಯೋಗವು ಖಮೇನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡಿದೆ. ಈ ಕುರಿತ ಫೋಟೋವೊಂದನ್ನು ಇರಾನ್ ನ ಭಾರತೀಯ ರಾಯಭಾರಿ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಪಕ್ಷದ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮತ್ತಿತರ ಹಲವರು ಕಾಣಿಸಿಕೊಂಡಿದ್ದಾರೆ.