

ಬಲೂಚಿಸ್ತಾನ್: ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ಒಂಬತ್ತು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಬಿಬಿಸಿ ಉರ್ದುಗೆ ತಿಳಿಸಿದ್ದಾರೆ.
ಜಿಯಾರತ್ ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುಕೋಟಿ ರೂಪಾಯಿ ಮೌಲ್ಯದ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಕಾವಲು ಕಾಯುತ್ತಿದ್ದ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಉಪ ಆಯುಕ್ತ ಅಬ್ದುಲ್ ಕುದ್ದೂಸ್ ಅಚಕ್ಜೈ ಅವರು ತಿಳಿಸಿದ್ದಾರೆ.
ದಾಳಿಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳೂ ಮೃತಪಟ್ಟಿದ್ದು, ಕಾಣೆಯಾದ ಸಿಬ್ಬಂದಿಯನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಜಿಯಾರತ್ನಲ್ಲಿ "ಉಗ್ರ ವಿರೋಧಿ ಕಾರ್ಯಾಚರಣೆ"ಯ ಭಾಗವಾಗಿ ಭದ್ರತಾ ಪಡೆಗಳು, ಪಾಕಿಸ್ತಾನಿ ತಾಲಿಬಾನ್(ಟಿಪಿಪಿ)ನ 15 ಸದಸ್ಯರನ್ನು ಕೊಂದಿವೆ ಎಂದು ಬಲೂಚಿಸ್ತಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಸಹ ಈ ದಾಳಿಯನ್ನು ಖಂಡಿಸಿದ್ದು, ಹತ್ಯೆಗೀಡಾದ ಅಧಿಕಾರಿಗಳು "ನಮ್ಮ ರಾಷ್ಟ್ರದ ಹೆಮ್ಮೆ" ಎಂದು ಹೇಳಿದ್ದಾರೆ.
ಬಲೂಚಿಸ್ತಾನ ರಾಜಧಾನಿ ಕ್ವೆಟ್ಟಾ ಎದುರಿಸುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ನಿರ್ಮಿಸಲಾಗುತ್ತಿರುವ ಮಾಂಗಿ ಅಣೆಕಟ್ಟಿನ ನಿರ್ಮಾಣ ಸ್ಥಳದಲ್ಲಿ ನಾವು ಕಾವಲು ಕಾಯುತ್ತಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.