

ದುಬೈ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿರುವ ಅಮೆರಿಕ, ಬುಧವಾರ ಮುಂಜಾನೆ ಇರಾನ್ನ ಪ್ರಮುಖ ಗುರಿಗಳ ಮೇಲೆ ವೈಮಾನಿಕ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಇರಾನ್ ಕಚ್ಚಾ ತೈಲ ಮಾರಾಟ ಮಾಡುವ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಹೊಸ ಆರ್ಥಿಕ ನಿರ್ಬಂಧಗಳನ್ನೂ ವಿಧಿಸಿದೆ.
ಅಮೆರಿಕದ ಈ ಕ್ರಮಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಇರಾನ್, ಗಲ್ಫ್ ರಾಷ್ಟ್ರಗಳಾದ ಬಹ್ರೈನ್ ಮತ್ತು ಕುವೈತ್ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ವರದಿಯಾಗಿದೆ.
ಈ ದಾಳಿ-ಪ್ರತಿದಾಳಿಗಳಿಂದ ಇಡೀ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಈಗಾಗಲೇ ಹಲವು ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ. ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಮಿತ್ರ ರಾಷ್ಟ್ರಗಳ ಭದ್ರತೆ ಕುರಿತೂ ಹೊಸ ಆತಂಕಗಳು ವ್ಯಕ್ತವಾಗಿವೆ.
ಇತ್ತೀಚೆಗೆ ಕದನ ವಿರಾಮಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದದ ಮೂಲಕ ಉದ್ವಿಗ್ನತೆ ತಗ್ಗುವ ನಿರೀಕ್ಷೆ ಮೂಡಿತ್ತು. ಆದರೆ, ಈ ಹೊಸ ಬೆಳವಣಿಗೆಗಳಿಂದ ಆ ಒಪ್ಪಂದದ ಭವಿಷ್ಯದ ಕುರಿತು ಅನುಮಾನಗಳು ಶುರುವಾಗುವಂತಾಗಿದೆ.
ಈ ಎಲ್ಲಾ ಬೆಳವಣಿಗೆಗಳು ಇರಾನ್ನ ಪರಮೋಚ್ಚ ನಾಯಕ ಖಮೇನಿ ಅವರ ಅಂತ್ಯಕ್ರಿಯೆ ನಡೆಯುತ್ತಿರುವ ವೇಳೆಯಲ್ಲೇ ನಡೆದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸೂಕ್ಷ್ಮಗೊಳಿಸಿದೆ.
ಅಂತ್ಯಕ್ರಿಯೆ ಅವಧಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದ ಕೆಲವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ಖಮೇನಿ ಅವರ ಅಂತ್ಯಕ್ರಿಯೆ ಮುಗಿದ ಬಳಿಕ ಶಾಶ್ವತ ಯುದ್ಧ ವಿರಾಮದ ಬಗ್ಗೆ ಹೊಸ ಸುತ್ತಿನ ಮಾತುಕತೆ ಆರಂಭವಾಗಬೇಕಿತ್ತು. ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯುವುದು, ಸಾಗರ ಮಾರ್ಗಗಳ ಭದ್ರತೆ ಹಾಗೂ ಇರಾನ್ನ ವಿವಾದಾತ್ಮಕ ಅಣು ಕಾರ್ಯಕ್ರಮ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಬೇಕಾಗಿತ್ತು. ಆದರೆ, ಇತ್ತೀಚಿನ ದಾಳಿ-ಪ್ರತಿದಾಳಿಗಳು ಈ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗಿ
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, "ಬೆದರಿಕೆ ಮತ್ತು ಬಲವಂತದ ಯುಗ ಮುಗಿದಿದೆ. ಇಂತಹ ಕ್ರಮಗಳಿಂದ ಯಾವುದೇ ಫಲ ಸಿಗುವುದಿಲ್ಲ. ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ" ಎಂದು ಹೇಳಿದ್ದಾರೆ.