

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸೋಮವಾರ ನಡೆದ ದರೋಡೆಯ ಸಂದರ್ಭದಲ್ಲಿ 28 ವರ್ಷದ ಹಿಂದೂ ಯುವ ವೈದ್ಯರೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಾಚಿಯ ಐಷಾರಾಮಿ ಕ್ಲಿಫ್ಟನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಖಾಸಗಿ ಬ್ಯಾಂಕಿನ ಹೊರಗೆ ದರೋಡೆಕೋರರು ಮತ್ತು ಬ್ಯಾಂಕ್ ಭದ್ರತಾ ಸಿಬ್ಬಂದಿಯ ನಡುವೆ ನಡೆದ ಗುಂಡಿನ ದಾಳಿಯಲ್ಲಿ ವೈದ್ಯ ಆಕಾಶ್ ಚಂದ್ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್ಎಸ್ಪಿ ಮೆಹ್ರೋಜ್ ಅಲಿ ತಿಳಿಸಿದ್ದಾರೆ.
ಚಂದ್ ತನ್ನ ತಂದೆ ಮತ್ತು ಸೋದರಸಂಬಂಧಿಯೊಂದಿಗೆ ಮತ್ತೊಂದು ಬ್ಯಾಂಕಿನಿಂದ 5 ಮಿಲಿಯನ್ ರೂಪಾಯಿ ಡ್ರಾ ಮಾಡಿಕೊಂಡು, ಇನ್ನೊಂದು ಬ್ಯಾಂಕಿನಲ್ಲಿ ಠೇವಣಿ ಇಡಲು ತಲಾ 2.5 ಮಿಲಿಯನ್ ಹಣವನ್ನು ಎರಡು ಪ್ಯಾಕೆಟ್ಗಳನ್ನು ತರುತ್ತಿದ್ದ ವೇಳೆ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಲಿ ಹೇಳಿದ್ದಾರೆ.
"ವೈದ್ಯನ ಕಾರು ಬ್ಯಾಂಕಿನ ಹೊರಗೆ ನಿಂತ ತಕ್ಷಣ, ಅವರನ್ನು ಫಾಲೋ ಮಾಡಿಕೊಂಡು ಬಂದ ಮತ್ತೊಂದು ಕಾರಿನಲ್ಲಿ ದರೋಡೆಕೋರರು, ಅವರಿಂದ ಹಣವನ್ನು ದೋಚಲು ಯತ್ನಿಸಿದ್ದಾರೆ, ಆದರೆ ಬಾಗಿಲಲ್ಲಿ ನಿಂತಿದ್ದ ಬ್ಯಾಂಕ್ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ದರೋಡೆಕೋರರು ಸಹ ಪ್ರತಿದಾಳಿ ನಡೆಸಿದ್ದು, ದಾಳಿಯಲ್ಲಿ ಚಂದ್ ಹತ್ಯೆಯಾಗಿದ್ದಾರೆ" ಎಂದು ಅಲಿ ತಿಳಿಸಿದ್ದಾರೆ.
ದರೋಡೆಕೋರರು 2.5 ಮಿಲಿಯನ್ ರೂಪಾಯಿ ಇದ್ದ ಒಂದು ಪ್ಯಾಕೆಟ್ನೊಂದಿಗೆ ಪರಾರಿಯಾಗಿದ್ದಾರೆ.
"ಯಾರ ಗುಂಡಿನಿಂದ ಚಂದ್ ಸಾವನ್ನಪ್ಪಿದ್ದಾನೆ ಎಂಬುದನ್ನು ಕಂಡುಹಿಡಿಯಲು ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಚಂದ್ ಕಳೆದ ಎರಡು ವರ್ಷಗಳಿಂದ ಕರಾಚಿಯ ಜಿನ್ನಾ ಸ್ನಾತಕೋತ್ತರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ದರೋಡೆಕೋರರನ್ನು ಹಿಡಿಯುವವರೆಗೆ ಕುಟುಂಬವು ಅವರ ಅಂತಿಮ ವಿಧಿಗಳನ್ನು ನಡೆಸುವುದಿಲ್ಲ ಎಂದು ಅವರ ಚಿಕ್ಕಪ್ಪ ಖೇಮ್ ಚಂದ್ ಹೇಳಿದ್ದಾರೆ.
"ನಾವು ಅವರ ಶವವನ್ನು ಶವಾಗಾರದಲ್ಲಿ ಇರಿಸಿದ್ದೇವೆ ಮತ್ತು ಅವರ ಸಾವಿಗೆ ಕಾರಣರಾದವರನ್ನು ಹಿಡಿಯುವವರೆಗೆ ನಾವು ಶವದೊಂದಿಗೆ ಪ್ರತಿಭಟನೆ ನಡೆಸುತ್ತೇವೆ" ಎಂದು ಖೇಮ್ ಚಂದ್ ಹೇಳಿದ್ದಾರೆ.