

ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ (UNSC) 2028-29ರ ತಾತ್ಕಾಲಿಕ ಸದಸ್ಯತ್ವಕ್ಕಾಗಿ ಭಾರತದ ಅಧಿಕೃತ ಅಭಿಯಾನ ಆರಂಭಿಸಿದ ಬಳಿಕ ಜೈಶಂಕರ್ ಅವರು ಗುಟೆರಸ್ ಅವರನ್ನು ಭೇಟಿಯಾಗಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ ಹಾಗೂ ಭಾರತದ ವಿಶ್ವಸಂಸ್ಥೆ ನಿಯೋಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾತುಕತೆ ವೇಳೆ ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಮಧ್ಯಪ್ರಾಚ್ಯ ಬಿಕ್ಕಟ್ಟು, ಉಕ್ರೇನ್ ಯುದ್ಧ ಹಾಗೂ ಸುಡಾನ್ ಸೇರಿದಂತೆ ಹಲವು ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಪ್ರಸ್ತುತ ಜಾಗತಿಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಹಾಗೂ ಸಾಂಸ್ಥಿಕ ಸುಧಾರಣೆಗಳು ಅತ್ಯಗತ್ಯ ಎಂದು ಜೈಶಂಕರ್ ಈ ವೇಳೆ ಒತ್ತಿ ಹೇಳಿದ್ದಾರೆ.
ಯಾರ್ಕ್ನ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆದ ಈ ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಜೈಶಂಕರ್, "ಉತ್ತಮವಾದ ಭೇಟಿ" ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ಜೈಶಂಕರ್, "ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿ ಮಾಡಿದೆ.
ಮಧ್ಯಪ್ರಾಚ್ಯ, ಏಷ್ಯಾ, ಉಕ್ರೇನ್ ಮತ್ತು ಸುಡಾನ್ ಸೇರಿದಂತೆ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದವು. ಭಾರತ-ವಿಶ್ವಸಂಸ್ಥೆ ಸಹಕಾರದ ಶಕ್ತಿಯನ್ನು ಗುರುತಿಸಿದೆವು ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯತ್ತ ಭಾರತದ ನಿಲುವು 'ಶಾಂತಿ (SHANTI - Securing Holistic Advancement through Norms, Trust and Integrity)' ಪರಿಕಲ್ಪನೆಯ ಮೇಲೆ ಆಧಾರಿತವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
2028-29ರ UNSC ಅವಧಿಗೆ ಭಾರತದ ಆದ್ಯತೆಗಳಲ್ಲಿ ಜಾಗತಿಕ ದಕ್ಷಿಣದ ಧ್ವನಿಯಾಗುವುದು, ಬಹುಪಕ್ಷೀಯ ವ್ಯವಸ್ಥೆಯಲ್ಲಿ ಸುಧಾರಣೆ, ಭವಿಷ್ಯಕ್ಕೆ ಸಜ್ಜಾದ ಶಾಂತಿಪಾಲನಾ ಕಾರ್ಯಾಚರಣೆ, ಕೃತಕ ಬುದ್ಧಿಮತ್ತೆ (AI) ದುರುಪಯೋಗದಿಂದ ಉಂಟಾಗುವ ಅಪಾಯಗಳ ಎದುರಿಸುವಿಕೆ, ಸಮುದ್ರ ಮಾರ್ಗಗಳ ಭದ್ರತೆ ಹಾಗೂ ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆಯುವುದು ಸೇರಿವೆ ಎಂದು ವಿವರಿಸಿದರು.
ಜಾಗತಿಕ ಮಟ್ಟದಲ್ಲಿ ಸಂಘರ್ಷ, ಹಿಂಸಾಚಾರ ಮತ್ತು ಅಸ್ಥಿರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಮಾನವ ಕಲ್ಯಾಣವನ್ನು ಹೆಚ್ಚಿಸುವ ಅಪಾರ ಸಾಮರ್ಥ್ಯವನ್ನು ಜಗತ್ತು ಹೊಂದಿದೆ. ಆದರೆ, ಇದೇ ಸಮಯದಲ್ಲಿ ಸಂಘರ್ಷಗಳು, ಹಿಂಸಾಚಾರ ಮತ್ತು ಅಸ್ಥಿರತೆ ಹೆಚ್ಚಾಗುತ್ತಿವೆ. ಇಂತಹ ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸಲು ವಿಶ್ವಸಂಸ್ಥೆ ಮುನ್ನಡೆ ವಹಿಸಬೇಕು ಹಾಗೂ ಭದ್ರತಾ ಮಂಡಳಿ ದಾರಿ ತೋರಿಸಬೇಕು ಎಂದು ಹೇಳಿದರು.
2028-29ರ UNSC ತಾತ್ಕಾಲಿಕ ಸದಸ್ಯತ್ವಕ್ಕಾಗಿ ನಡೆಯುವ ಚುನಾವಣೆಯಲ್ಲಿ ಭಾರತ ಏಷ್ಯಾ-ಪೆಸಿಫಿಕ್ ವಿಭಾಗದ ಏಕೈಕ ಸ್ಥಾನಕ್ಕಾಗಿ ತಜಿಕಿಸ್ತಾನದೊಂದಿಗೆ ಸ್ಪರ್ಧಿಸಲಿದೆ. ಚುನಾವಣೆ ಮುಂದಿನ ವರ್ಷದ ಜೂನ್ನಲ್ಲಿ ನಡೆಯಲಿದೆ.
ಭಾರತ ಈ ಹಿಂದೆ 1950-51, 1967-68, 1972-73, 1977-78, 1984-85, 1991-92, 2011-12 ಹಾಗೂ 2021-22ರ ಅವಧಿಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯವಾಗಿತ್ತು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಜಾಗತಿಕ ದಕ್ಷಿಣದ ರಾಷ್ಟ್ರಗಳ ಸಮಸ್ಯೆಗಳು ಮತ್ತು ಆದ್ಯತೆಗಳನ್ನು ಭಾರತ ಪ್ರಸ್ತಾಪಿಸಲಿದೆ ಎಂದು ಜೈಶಂಕರ್ ಹೇಳಿದ್ದಾರೆ.
"ಜಾಗತಿಕ ಆಡಳಿತ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಅದು ಪ್ರಜಾಪ್ರಭುತ್ವ, ಪ್ರತಿನಿಧಿತ್ವ ಮತ್ತು ಪರಿಣಾಮಕಾರಿತ್ವವನ್ನು ಹೊಂದಿರಬೇಕು. ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿ ಒಮ್ಮತ ನಿರ್ಮಿಸುವಲ್ಲಿ ಭಾರತದಂತಹ ರಾಷ್ಟ್ರಗಳು ಪ್ರಮುಖ ಪಾತ್ರ ವಹಿಸಬಹುದು" ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತದ ಜಾಗತಿಕ ಪಾತ್ರ, ಮಾನವೀಯ ನೆರವು ಕಾರ್ಯಗಳು ಹಾಗೂ UNSC ಅಭಿಯಾನದ ಆದ್ಯತೆಗಳನ್ನು ಬಿಂಬಿಸುವ ವಿಶೇಷ ವಿಡಿಯೋ ಪ್ರದರ್ಶಿಸಲಾಯಿತು. ಯುದ್ಧದ ಬದಲಿಗೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಭಾರತದ ನಿಲುವನ್ನು ಜೈಶಂಕರ್ ಪುನರುಚ್ಚರಿಸಿದರು.